
ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮುಖ್ಯ–1) ಫಲಿತಾಂಶದಲ್ಲಿ ಬೆಂಗಳೂರಿನ ನಾರಾಯಣ ಕೋ–ಕಾವೇರಿ ಭವನ ವಿದ್ಯಾರ್ಥಿ ಎ.ವಿಷ್ಣು ಸಾಯಿ ತೇಜಾ ಅವರು 99.99 ಪರ್ಸೆಂಟೈಲ್ ಪಡೆದಿದ್ದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಭೌತವಿಜ್ಞಾನದಲ್ಲಿ 100, ರಸಾಯನವಿಜ್ಞಾನದಲ್ಲಿ 99.99, ಗಣಿತದಲ್ಲಿ 99.97 ಪರ್ಸೆಂಟೈಲ್ ಪಡೆದಿದ್ದಾರೆ. ಅಖಿಲಭಾರತ ಮಟ್ಟದಲ್ಲಿ ಅವರು 14ನೇ ರ್ಯಾಂಕ್ ಗಳಿಸಿದ್ದಾರೆ.
ವಿಷ್ಣು ಅವರ ತಂದೆ ರವಿಕುಮಾರ್ ಶೆಟ್ಟಿ ಬೆಂಗಳೂರಿನ ವಿಸ್ಟಿಯಾನ್ ಸಂಸ್ಥೆಯಲ್ಲಿ ಗ್ಲೋಬಲ್ ಎಂಜಿನಿಯರಿಂಗ್ ಲೀಡರ್ ಆಗಿದ್ದು, ತಾಯಿ ಪಲ್ಲವಿ ಎಂಬಿಎ ಪದವೀಧರೆ. ವಿಷ್ಣು ದೇಶದ ಪ್ರಮುಖ ಐಐಟಿಗಳಲ್ಲಿ ಕಂಪ್ಯೂಟರ್ ಸೈನ್ಸ್ಗೆ ಪ್ರವೇಶ ಪಡೆಯುವ ಗುರಿ ಹೊಂದಿದ್ದಾರೆ.
‘ಆರಂಭದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾಲೇಜಿನಲ್ಲೇ ಇರುತ್ತಿದ್ದೆ. ನಂತರ ಸಂಜೆ 5.30ಕ್ಕೆ ಮನೆಗೆ ಬಂದು ರಾತ್ರಿ 11ರವರೆಗೆ ಓದುತ್ತಿದ್ದೆ. ಕ್ರಿಕೆಟ್ ನೋಡುವುದು ಮತ್ತು ಯೂಟ್ಯೂಬ್ ವೀಕ್ಷಿಸುವುದು ಒತ್ತಡ ನಿವಾರಣೆಗೆ ಸಹಾಯ ಮಾಡಿತು. ಭೌತವಿಜ್ಞಾನ ಮತ್ತು ಗಣಿತ ನನ್ನ ಮೆಚ್ಚಿನ ವಿಷಯಗಳು. ಹಾಗಾಗಿ, ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.