ಬಿಜೆಪಿ ಹಂಚಿಕೊಂಡಿರುವ ಪೋಟೊ
ಬೆಂಗಳೂರು: ಸ್ವಲ್ಪವಾದರೂ ಭಾಷಾ ಸ್ವಾಭಿಮಾನವಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ಸಿ.ಎಂ, ಎಂ.ಕೆ. ಸ್ಟಾಲಿನ್ ಅವರಿಗೆ ಹೇಳಿಸಿ ನಟ ಕಮಲ್ ಹಾಸನ್ ಅವರಿಂದ ಕನ್ನಡಿಗರ ಕ್ಷಮೆ ಕೇಳುವಂತೆ ಮಾಡಬೇಕು ಎಂದು ಕರ್ನಾಟಕ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ‘ತಮಿಳುನಾಡಿಗೆ ಹೋಗಿ ತಮಿಳರಿಂದ ಪ್ರಶಸ್ತಿ ಪಡೆದು ಬಂದ ಸಿದ್ದರಾಮಯ್ಯನವರೇ, ನಿಮಗೆ ಸ್ವಲ್ಪವಾದರೂ ಭಾಷಾ ಸ್ವಾಭಿಮಾನವಿದ್ದರೆ, ಮಾತೃ ಭಾಷೆ ಕನ್ನಡದ ಮೇಲೆ ಪ್ರೀತಿ, ಕಾಳಜಿಯಿದ್ದರೆ, ನಿಮ್ಮ ಇಂಡಿ ಮೈತ್ರಿಕೂಟದ ಭಾಗವಾದ ಡಿಎಂಕೆ ಪಕ್ಷದ ಚಿನ್ನತಂಬಿ ಸ್ಟಾಲಿನ್ ಅವರಿಗೆ ಹೇಳಿ ಕಮಲ್ ಹಾಸನ್ ಅವರಿಂದ ಕ್ಷಮೆ ಕೇಳಿಸಿ’ ಎಂದು ಆಗ್ರಹಿಸಿದೆ.
‘ಒಂದು ವೇಳೆ ಅದು ಆಗದಿದ್ದರೆ ಡಿಎಂಕೆ ಮೈತ್ರಿ ಕೂಟದಿಂದ ಆಚೆ ಬಂದು ಕನ್ನಡಿಗರ ಘನತೆ ಕಾಪಾಡಿ’ ಎಂದು ಒತ್ತಾಯಿಸಿದೆ.
‘ಕನ್ನಡ ಹಾಗೂ ಕರ್ನಾಟಕದ ಇತಿಹಾಸ ಮಹಾಭಾರತದಿಂದಲೂ ಇದೆ. ಕನ್ನಡಿಗರನ್ನು ಎಂದೂ ಪರಭಾಷಿಕರ ಮುಂದೆ ತಲೆಬಾಗುವಂತೆ ಮಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದೊಂದಿಗೆ ಬಿಜೆಪಿಯು, ಸ್ಟಾಲಿನ್ ಹಾಗೂ ಡಿಎಂಕೆ ನಾಯಕರು ಸಿದ್ದರಾಮಯ್ಯ ಅವರಿಗೆ ಸನ್ಮಾನಿಸುತ್ತಿರುವ ಫೋಟೊವನ್ನು ಹಂಚಿಕೊಂಡು ಕಾಲೆಳೆದಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಥಗ್ ಲೈಫ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕಮಲ್ ಹಾಸನ್ ಅವರು ‘ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ’ ಎಂಬರ್ಥದಲ್ಲಿ ಹೇಳಿದ್ದರು. ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡ ಸ್ವತಂತ್ರ ಭಾಷೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.