ADVERTISEMENT

31ರ ಕರ್ನಾಟಕ ಬಂದ್ ಕರೆ: ಚಿತ್ರೋದ್ಯಮದಿಂದ ನೈತಿಕ ಬೆಂಬಲ ಮಾತ್ರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 19:37 IST
Last Updated 25 ಡಿಸೆಂಬರ್ 2021, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬಲವಂತದ ಬಂದ್‌ಗೆ ನಮ್ಮ ವಿರೋಧವಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.

ಬಂದ್‌ ಕರೆಗೆ ಸಂಬಂಧಿಸಿದಂತೆ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ‘ಹೋರಾಟಗಾರರಿಗೆ ನೈತಿಕ ಬೆಂಬಲ ಇದೆ. ಆದರೆ, ಆ ದಿನ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಳ್ಳುವುದಿಲ್ಲ. ಬಲವಂತದ ಬಂದ್‌ ಸರಿಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಂಇಎಸ್‌ ಪುಂಡಾಟ ನಿಯಂತ್ರಣ, ಕನ್ನಡದ ಧ್ವಜ ಸುಟ್ಟವರ, ಮಹನೀಯರ ಪುತ್ಥಳಿಗೆ ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಡಿ.31ರಂದು ಮಂಡಳಿ ವತಿಯಿಂದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಬಂದ್‌ ಸಂಬಂಧಿಸಿದಂತೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋಆ ನಿರ್ಧಾರಕ್ಕೆಬದ್ಧ’ ಎಂದು ನಟಶಿವರಾಜ್‌ ಕುಮಾರ್‌ ಹೇಳಿದರು.

‘ನಾಡು, ನುಡಿ ಸಂಬಂಧಿಸಿದ ವಿಚಾರಕ್ಕೆ ನಾನು ಬದ್ಧನಿದ್ದೇನೆ. ಆದರೆ, ಈಗ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ಅದಕ್ಕೆ ಸಂಬಂಧಪಟ್ಟವರು (ರಾಜ್ಯ ಸರ್ಕಾರ) ನಿರ್ಧಾರ ತೆಗೆದುಕೊಂಡಿದ್ದಾರೆ. ಅದು ಸಂತಸ ತಂದಿದೆ’ ಎಂದರು.

‘ಬಂದ್‌ ಕರೆ ನೀಡಿದ ದಿನ ಕನ್ನಡದ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಬಂದ್‌ ಮಾಡಿದರೆ ಕನ್ನಡಕ್ಕೆ ದ್ರೋಹ ಬಗೆದಂತಾಗುತ್ತದೆಯಲ್ಲವೇ’ ಎಂದರು.

‘ಬಂದ್ ಬೇಡ. ಸರ್ಕಾರ ಕ್ರಮ ಕೈಗೊಳ್ಳಲಿ’
ರಾಮನಗರ:
‘ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನ ಇಲ್ಲ. ಬದಲಿಗೆ ಎಂಇಎಸ್‌ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿಶನಿವಾರ ಹೇಳಿದರು.

ಚನ್ನಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಬಂದ್‌ನಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ಆದರೆ, ಇಲ್ಲಿನ ವ್ಯಾಪಾರಿಗಳು, ಕಾರ್ಮಿಕರಿಗೆ ತೊಂದರೆ ಆಗಲಿದೆ. ಇದನ್ನು ಕರೆ ನೀಡಿದವರು ಯೋಚಿಸಬೇಕು’ ಎಂದರು.

31ರ ಬಂದ್‌ ವಾಪಸಿಗೆ ಆಗ್ರಹ
ಬೆಂಗಳೂರು:
‘ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿ. 31ರ ಬಂದ್ ಹಿಂತೆಗೆದುಕೊಳ್ಳಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಮನವಿ ಮಾಡಿದರು.

‘ರಾಜ್ಯದ ನೆಲ, ಜಲ, ನುಡಿಯ ವಿಚಾರಗಳಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಕನ್ನಡಪರ ಸಂಘಟನೆಗಳ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ಕನ್ನಡಪರ ಸಂಘಟನೆಗಳ ಜತೆ ಮಾತುಕತೆಗೆ ಸರ್ಕಾರ ಸಿದ್ಧವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.