ಬೆಂಗಳೂರು: ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ (ಹಂಪನಾ) ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಪೊಲೀಸರ ನಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಖಂಡಿಸಿದೆ.
‘ಹಿರಿಯ ವಿದ್ವಾಂಸರಾದ ಹಂಪನಾ ಅವರನ್ನು ಮಂಡ್ಯದ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿರುವುದು ಖಂಡನೀಯ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ವಿಚಾರವಾಗಿ ಪರಿಷತ್ತು ಯಾವಾಗಲೂ ಸಾಹಿತಿಗಳ ಪರವಾಗಿಯೇ ನಿಲ್ಲುತ್ತದೆ. ಅವರು ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಚಳವಳಿಯನ್ನು ಪ್ರಸ್ತಾಪಿಸಿ, ಕೇಂದ್ರದ ವಿರುದ್ಧ ಟೀಕೆ ಮಾಡಿ ದ್ದರು. ಯಾರನ್ನೇ ಆಗಲಿ ಟೀಕಿಸುವ ಮತ್ತು ವಿಮರ್ಶಿಸುವ ಅಧಿಕಾರವನ್ನು ಸಂವಿ
ಧಾನವು ನೀಡಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.
‘ಮೇಲಾಧಿಕಾರಿಗೆ ತಿಳಿಸದೇ ಹಿರಿಯ ಸಾಹಿತಿಯೊಬ್ಬರನ್ನು ಠಾಣೆಗೆ ಕರೆಸಿದ್ದು ಕೂಡ ಆಶ್ಚರ್ಯಕರ. ಇಂತಹ ಅಚಾತುರ್ಯಗಳು ಮರುಕಳಿಸದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ನಿಗಾ ವಹಿಸಬೇಕು’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಸುಗಮ ಸಂಗೀತ ಪರಿ ಷತ್ತಿನ ಗೌರವಾಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ‘ಮಂಡ್ಯ ಪೊಲೀಸರು ಹಂಪನಾ ಅವರನ್ನು ನಡೆಸಿಕೊಂಡ ರೀತಿ ಖಂಡ ನೀಯ. ವಯೋವೃದ್ಧರಾಗಿರುವ ಕಾರಣ ಅವರ ಮನೆಗೆ ಬಂದು ಭೇಟಿ ಮಾಡುವ ಕನಿಷ್ಠ ಸೌಜನ್ಯವೂ ಪೊಲೀಸರಿಗೆ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.