
ಪ್ರಿಯಾಂಕ್ ಖರ್ಗೆ ಮತ್ತು ಬಿ.ವೈ.ವಿಜಯೇಂದ್ರ
ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪಾಳೇಗಾರಿಕೆ ರಾಜಕಾರಣ ಅಟ್ಟಹಾಸ ಮೆರೆಯುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನ ಪೂರೈಸಿದ ಸಂಭ್ರಮ ಆಚರಿಸಲು ಸಂಘ ಹಾಗೂ ಹಿಂದೂ ಪರ ಸಂಘಟನೆಗಳು ನಿಯಮಾನುಸಾರ ಅನುಮತಿ ಪಡೆದು ಆಯೋಜಿಸಿದ್ದ ಸಂಘದ ಪಥಸಂಚಲನ ಕಾರ್ಯಕ್ರಮದ ಮೇಲೆ ಕೆಂಗಣ್ಣು ಬೀರಿರುವ ಸ್ಥಳೀಯ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ದ್ವೇಷ ರಾಜಕಾರಣವನ್ನು ಮುಂದುವರೆಸಿದ್ದಾರೆ’ ಎಂದು ವಿಜಯೇಂದ್ರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಚಿತ್ತಾಪುರದಲ್ಲಿ ನಿನ್ನೆ (ಶುಕ್ರವಾರ) ತಡರಾತ್ರಿ ಪುರಸಭೆಯ ಸಿಬ್ಬಂದಿ ಆರ್ಎಸ್ಎಸ್ ಪಥಸಂಚಲನದ ಆಕರ್ಷಣೆಗಾಗಿ ಅನುಮತಿ ಪಡೆದು ಕಟ್ಟಲಾಗಿದ್ದ ಭಗವಾಧ್ವಜಗಳು, ಬ್ಯಾನರ್ಗಳನ್ನು ಕಿತ್ತೆಸೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ಆರ್ಎಸ್ಎಸ್ ಶತಮಾನೋತ್ಸವದ ಆಚರಣೆಯನ್ನು ದುರುದ್ದೇಶ ಪೂರ್ವಕವಾಗಿ ತಡೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ’ ಎಂದು ಅವರು ಕಿಡಿಕಾರಿದ್ದಾರೆ.
‘ಚಿತ್ತಾಪುರದಿಂದ ನಿಯಂತ್ರಿಸುತ್ತಿರುವ ರಿಪಬ್ಲಿಕ್ ಆಫ್ ಕಲಬುರಗಿಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಲು ಬಿಜೆಪಿ ಜನರ ಧ್ವನಿಯಾಗಿ ಹೋರಾಡಲಿದೆ. ಅಧಿಕಾರದ ಮದ ನೆತ್ತಿಗೇರಿಸಿಕೊಂಡಂತೆ ವರ್ತಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರೇ, ಈ ನೆಲದಲ್ಲಿ ದೇಶಭಕ್ತರನ್ನು ಕೆಣಕಿ ಉಳಿದವರಿಲ್ಲ ಎಂಬ ವಾಸ್ತವಿಕ ಸತ್ಯ ನೆನಪಿರಲಿ’ ಎಂದು ವಿಜಯೇಂದ್ರ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.