ADVERTISEMENT

ರಾಜಣ್ಣ ‘ರಾಜೀನಾಮೆ’: ವಿಧಾನಸಭೆಯಲ್ಲಿ ವಾಕ್ಸಮರ

‘ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ: ಆರ್‌.ಅಶೋಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:30 IST
Last Updated 12 ಆಗಸ್ಟ್ 2025, 0:30 IST
ಕೆ.ಎನ್‌. ರಾಜಣ್ಣ
ಕೆ.ಎನ್‌. ರಾಜಣ್ಣ   

ಬೆಂಗಳೂರು: ಕೆ.ಎನ್‌. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ‘ರಾಜೀನಾಮೆ’ ನೀಡಿದ್ದಾರೆಂಬ ಸುದ್ದಿ ವಿಧಾನಸಭೆಯಲ್ಲಿ ಸೋಮವಾರ ಕೆಲಕಾಲ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ರಾಜಣ್ಣ ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ? ಎಷ್ಟು ಹಣ ಹೊಡೆದಿದ್ದಾರೆ? ಯಾರ ಮನೆಯಲ್ಲಿ ಇರಿಸಿದ್ದಾರೆ? ಅವರ ಮೇಲೆ ಯಾವ ಭ್ರಷ್ಟಾಚಾರದ ಆರೋಪವಿದೆ? ಮುಖ್ಯಮಂತ್ರಿ ಜೊತೆಗೆ ಇರುವವರು ರಾಜಣ್ಣ. ಈ ಬಗ್ಗೆ ಸದನಕ್ಕೆ ಸ್ಪಷ್ಟಪಡಿಸಬೇಕು’ ಎಂದು  ಆಗ್ರಹಿಸಿದರು. ಆಗ ಪ್ರತಿಕ್ರಿಯಿಸಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ಮಾಧ್ಯಮಗಳಲ್ಲಿ ಸುದ್ದಿ ಬಂದ ತಕ್ಷಣ ಸ್ಪಷ್ಟನೆ ಕೇಳುವುದು ಸರಿಯಲ್ಲ. ಹಾಗೇನಾದರೂ ಬೆಳವಣಿಗೆಗಳಾಗಿದ್ದರೆ ಮುಖ್ಯಮಂತ್ರಿ ಸದನಕ್ಕೆ ತಿಳಿಸುತ್ತಾರೆ’ ಎಂದರು.

ಅದಕ್ಕೆ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌, ‘ಸದನದಲ್ಲೇ ಇರುವ ರಾಜಣ್ಣ ಅವರು ರಾಜೀನಾಮೆ ಕೊಟ್ಟಿದ್ದಾರೊ ಇಲ್ಲವೊ ಎಂಬ ಬಗ್ಗೆ ಅವರೇ ಸ್ಪಷ್ಟಪಡಿಸಲಿ’ ಎಂದು ಒತ್ತಾಯಿಸಿದರು. ದನಿಗೂಡಿಸಿದ ಆರ್. ಅಶೋಕ, ‘ರಾಜಣ್ಣ ಅವರು ಈಗ ಮಂತ್ರಿಯಾಗಿ ಇಲ್ಲಿ ಕುಳಿತಿದ್ದಾರೊ ಇಲ್ಲವೊ ಎಂದು ತಿಳಿಸಲಿ’ ಎಂದು ಆಗ್ರಹಿಸಿದರು. ಬಿಜೆಪಿಯ ವಿ. ಸುನಿಲ್ ಕುಮಾರ್‌, ‘ಸದನದಲ್ಲಿ ರಾಜಣ್ಣ ಅವರನ್ನು ನಾವು ಏನೆಂದು ಸಂಭೋದಿಸಬೇಕು’ ಎಂದು ಕೇಳಿದರು. ಆಗ ಸಭಾಧ್ಯಕ್ಷ ಯು.ಟಿ. ಖಾದರ್‌, ‘ಮನಸ್ಸಿಗೆ ಬಂದಂತೆ ಮಾತನಾಡಬೇಡಿ’ ಎಂದು ಗದರಿದರು. ‘ರಾಜಣ್ಣ ಯಾಕೆ ಮೌನವಾಗಿದ್ದಾರೆ’ ಎಂದು ಬಿಜೆಪಿಯ ಸಿ.ಸಿ. ಪಾಟೀಲ ಕೆಣಕಿದರು.

ADVERTISEMENT

ವಿರೋಧ ಪಕ್ಷದ ಸದಸ್ಯರ ಒತ್ತಾಯ ಹೆಚ್ಚುತ್ತಿದ್ದಂತೆ ಸಚಿವ ಕೃಷ್ಣ ಬೈರೇಗೌಡ, ‘ರಾಜಣ್ಣ ಅವರು ಸಚಿವರಾಗಿ ಇಲ್ಲಿದ್ದಾರೆಂದು ಕಾನೂನು ಸಚಿವರೇ ಹೇಳಿದ್ದಾರೆ. ಮುಖ್ಯಮಂತ್ರಿ ಬಂದು ಮಾತನಾಡುತ್ತಾರೆ. ಇಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೇರಿದ್ದೇವೆ. ಆ ವಿಚಾರಗಳ ಬಗ್ಗೆ ಚರ್ಚಿಸೋಣ’ ಎಂದರು.

ಬಿಜೆಪಿಯ ಅರವಿಂದ ಬೆಲ್ಲದ, ‘ದಲಿತ ಮಂತ್ರಿ ರಾಜಣ್ಣ ಹನಿಟ್ರ್ಯಾಪ್‌ ಆಗಿದೆ ಎಂದಿದ್ದಕ್ಕೆ ರಾಜೀನಾಮೆಯ ಶಿಕ್ಷೆನಾ? ಅವರು ಏನು ತಪ್ಪು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು. ‘ರಾಜಣ್ಣ ಪಾಕಿಸ್ತಾನದಿಂದ ಬಂದಿದ್ದಾರಾ’ ಎಂದೂ ಅಶೋಕ ಪ್ರಶ್ನಿಸಿದರು. ಕೆರಳಿದ ಸಚಿವ ಕೃಷ್ಣ ಬೈರೇಗೌಡ, ‘ರಾಜಕೀಯ ಮಾಡುವುದನ್ನು ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ’ ಎಂದು ಸಿಡುಕಿದರು.

ವಾಕ್ಸಮರದ ನಡುವೆ ಎದ್ದು ನಿಂತ ರಾಜಣ್ಣ, ‘ನೀವು ಮಾತನಾಡಬೇಡಿ. ಮುಖ್ಯಮಂತ್ರಿ ಬಂದು ಮಾತನಾಡುತ್ತಾರೆಂದು ಕಾನೂನು ಸಚಿವರು ಹೇಳಿದ್ದಾರೆ. ಅವರ ಮಾತಿಗೆ ಬದ್ಧನಾಗಿದ್ದೇನೆ. ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು, ಇಲ್ಲಿ ಹೇಗೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನಾಚಿಕೆ ಆಗಬೇಕು ಎಂದಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು’ ಎಂದು ತಿರುಗೇಟು ನೀಡಿದರು.

ಆಗ ಅಶೋಕ, ‘ನಾನು ನಾಚಿಕೆ ಪದ ಬಳಸಿಲ್ಲ. ನೀವು ಮಂತ್ರಿ ಆಗದಿದ್ದಲ್ಲಿ ಅಲ್ಲಿ ಕೂರಬಾರದು ಎಂದಷ್ಟೇ ಹೇಳಿದ್ದೇನೆ’ ಎಂದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌, ಕೊನೆಗೂ ಸದಸ್ಯರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.