ADVERTISEMENT

ಕಡೂರು ವಿಧಾನಸಭಾ ಕ್ಷೇತ್ರ: ಬಯಸಿದ್ದು ಕಾಂಗ್ರೆಸ್‌; ಸಿಕ್ಕಿದ್ದು ಜೆಡಿಎಸ್‌

ಬಿ.ಜೆ.ಧನ್ಯಪ್ರಸಾದ್
Published 11 ಮಾರ್ಚ್ 2023, 19:31 IST
Last Updated 11 ಮಾರ್ಚ್ 2023, 19:31 IST
ಸಿ.ಎಂ. ಧನಂಜಯ
ಸಿ.ಎಂ. ಧನಂಜಯ   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಸಿ.ಎಂ. ಧನಂಜಯ ಅವರನ್ನು ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ಸಿ.ಎಂ. ಧನಂಜಯ ಅವರು ಬೆಂಗಳೂರಿನ ಚನ್ನಸಂದ್ರದವರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿಯನ್ನೂ ಸಲ್ಲಿಸಿದ್ದರು.

ಕಡೂರು ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿದೆ. ಹಾಸನ ಭಾಗದಲ್ಲಿ ಜೆಡಿಎಸ್‌ ಚಟುವಟಿಕೆಗಳಲ್ಲಿ ಬಿಗಿ ಹಿಡಿತ ಸಾಧಿಸಿರುವ ಶಾಸಕ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್‌ ಅವರು ಮುಖಂಡರ ಸಮ್ಮುಖದಲ್ಲಿ ಕಡೂರು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿ, ‘ಹೊಸಮುಖ’ ಪರಿಚಯಿಸಿದ್ದಾರೆ.

ADVERTISEMENT

ಕಡೂರು ಕ್ಷೇತ್ರದ ವೈ.ಎಸ್‌.ವಿ. ದತ್ತ ಅವರು ಜೆಡಿಎಸ್‌ ತೊರೆದಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರನ್ನು ಸೋಲಿ ಸಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್‌, ಧನಂಜಯ ಅವರನ್ನು ಕರೆತಂದು ಟಿಕೆಟ್‌ ಘೋಷಿಸಿದೆ.

ಧನಂಜಯ ಅವರು ಕುರುಬ ಸಮುದಾಯದವರು. ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದರು. ಕರ್ನಾಟಕ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಮಾಜಿ ಅಧ್ಯಕ್ಷರು. ವೃತ್ತಿಯಲ್ಲಿ ವಕೀಲ.

ಕಳೆದ ಬಾರಿ ಕಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್‌ ಕೈತಪ್ಪಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ಕೊನೆಗೆ ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.