ADVERTISEMENT

ಟೂಲ್‌ಕಿಟ್ ಬಳಸಿ ಆರೋಪಿಸಲು ಪ್ರಯತ್ನಿಸಿ: ಕಾಂಗ್ರೆಸ್– ಜೆಡಿಎಸ್ ವಿರುದ್ಧ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2023, 5:46 IST
Last Updated 5 ಜನವರಿ 2023, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಇದರಿಂದ ಸಹಜವಾಗಿಯೇ ಕಾಂಗ್ರೆಸ್ –ಜೆಡಿಎಸ್‌ ನಾಯಕರಿಗೆ ಕಳವಳವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಟೂಲ್‌ಕಿಟ್‌ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು’ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದೆ.

‘ಈಗಾಗಲೇ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯ 24ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಯನ್ನು ತಡೆಯಬೇಕಾದ್ದು ವಿರೋಧ ಪಕ್ಷಗಳು ಅಗತ್ಯವಾಗಿ ಮಾಡಬೇಕಾದ ಕೆಲಸವಾಗಿದೆ. ಆದರೆ, ಇದು ಅವರ ವಿಫಲಯತ್ನವಾಗುವುದಂತೂ ಕಟ್ಟಿಟ್ಟ ಬುತ್ತಿ’ ಎಂದು ಬಿಜೆಪಿ ಕಿಚಾಯಿಸಿದೆ.

ADVERTISEMENT

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರ ಟೂಲ್‌ಕಿಟ್‌ಗಳು ಸಹಜವಾಗಿ ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮಗಳನ್ನು ಅವಲಂಬಿಸಿದ್ದು, ಇಂಥದ್ದೇ ಯಾವುದಾದರೂ ಸುಳ್ಳು ಸುದ್ದಿಗಳನ್ನು ಹರಿಬಿಡುವುದನ್ನೇ ನಾವು ಎದುರು ನೋಡುತ್ತಿದ್ದೇವೆ. ಆದರೆ, ಅವೆಲ್ಲಕ್ಕೂ ನಮ್ಮ ಒಂದೇ ಉತ್ತರವಾಗಿ ನಾವು ಮಾತಾಡಲ್ಲ, ರಾಜ್ಯದ ಅಭಿವೃದ್ಧಿ ಮಾತಾಡುತ್ತದೆ’ ಎಂದು ಬಿಜೆಪಿ ಗುಡುಗಿದೆ.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆ, ತುಮಕೂರಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಕಾಂಗ್ರೆಸ್‌ ಕನಸ್ಸಲ್ಲೂ ಕಾಣುವುದಕ್ಕಾಗುವುದಿಲ್ಲ. ಹಾಗೇ ಚಿತ್ರದುರ್ಗದಲ್ಲಿ 1,96,093 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಎಂಬುದೆಲ್ಲ ಏನೆಂದೂ ಜಾತಿಹುಳು ಜೆಡಿಎಸ್‌ನ ಜಡಮಂಡೆಗೆ ಅರ್ಥವೂ ಆಗುವುದಿಲ್ಲ’ ಎಂದು ಬಿಜೆಪಿ ಟೀಕಿಸಿದೆ.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನಮ್ಮ ಒಂದೇ ಒಂದು ಕೋರಿಕೆಯೇನೆಂದರೆ, ಧಾವಂತದಲ್ಲಿ ನಂದಿನಿ - ಅಮುಲ್‌ ಬಗ್ಗೆ ಸುಳ್ಳಾಡಿದಂತೆ ಮತ್ತೊಮ್ಮೆ ಸುಳ್ಳಾಡಿ, ಉಳಿದಿರುವ ನಿಮ್ಮ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ತೆಗೆದುಕೊಳ್ಳಬೇಡಿ. ಸುಳ್ಳು ನಾಳೆಯೂ ಆಡಬಹುದು, ಮರ್ಯಾದೆ ಮತ್ತೆ ಬರುವುದಿಲ್ಲ’ ಎಂದು ಬಿಜೆಪಿ ಲೇವಡಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.