ಬೆಂಗಳೂರು: ‘ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರಿಗೆ ನಾಲಗೆಯ ಮೇಲೆ ಸದಾ ಕಂಡವರ ಎಂಜಲು ಚಪ್ಪರಿಸುವ ಅಭ್ಯಾಸವಿದೆ. ಮುಸ್ಲಿಂ ಸಮುದಾಯದವರಿಗೆ ಅವರೇ ದೊಡ್ಡ ಶತ್ರು’ ಎಂದು ಜೆಡಿಎಸ್ ಟೀಕಿಸಿದೆ.
ಜಮೀರ್ ಅಹಮದ್ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿರುವ ಜೆಡಿಎಸ್, ‘ಜಮೀರ್ ಅಹಮದ್, ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ರಾಜಕಾರಣಕ್ಕಾಗಿ ನೀವು ಆ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದೀರಿ? ಎಚ್.ಡಿ.ದೇವೇಗೌಡರ ಕುಟುಂಬ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ದೇಶಕ್ಕೆ ಗೊತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಸರಿ ಇರುವುದಿಲ್ಲ’ ಎಂದು ಗುಡುಗಿದೆ.
‘ಅರಮನೆಯಂಥ ವಿಲಾಸಿ ಭವನದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ನಿಮಗೆ, ನಿಮ್ಮದೇ ಕ್ಷೇತ್ರದ ಗೌರಿಪಾಳ್ಯ, ಪಾದರಾಯನಪುರದ ಬಡ ಮುಸ್ಲಿಮರು ಎಂಥ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾ? ಕಾಮಾಲೆ ಕಣ್ಣಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನಿಮಗೆ ಮುಸ್ಲಿಮರ ನೈಜಸ್ಥಿತಿಯ ಬಗ್ಗೆ ಅರಿವಿದೆಯಾ’ ಎಂದು ಜೆಡಿಎಸ್ ಪ್ರಶ್ನಿಸಿದೆ.
‘ಹರಕಲು ನಾಲಿಗೆಯ ಜಮೀರ್, ಮುಸ್ಲಿಂ ಸಮುದಾಯಕ್ಕೆ ಸೇರಿದ ನಿಮಗೆ ರಾಜಕೀಯ ಜನ್ಮಕೊಟ್ಟಿದು ಇದೇ ಕುಮಾರಣ್ಣ. ವಿಧಾನಸಭೆಯ ಮಾರ್ಷಲ್ಗಳು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದಾಗ ಇದೇ ಕುಮಾರಣ್ಣ ನಿಮ್ಮ ಮಾನ ಕಾಪಾಡಿದ್ದು. ಅಂದು ಶಪಥಗೈದ ಕುಮಾರಣ್ಣ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ನೆನಪಿಲ್ಲವೇ? ನಿಯತ್ತಿಲ್ಲದ ನಿಮಗೆ ಇದೆಲ್ಲಾ ಅರ್ಥವಾದೀತೆ?’ ಎಂದು ಜೆಡಿಎಸ್ ಪ್ರಶ್ನಿಸಿದೆ.
‘ಉಂಡ ಮನೆಯ ಗಳ ಇರಿಯುವ ಜಮೀರ್, ಸಿಎಂ ಇಬ್ರಾಹಿಂ ಅವರ ರಾಜಕೀಯ ಹಿತದ ಬಗ್ಗೆ ಈಗ ನೆನಪು ಬಂತಾ ನಿಮಗೆ? ಹಿಂದೆ, ಇದೇ ಸಿಎಂ ಇಬ್ರಾಹಿಂ ಅವರನ್ನು ಅದೇ ನಿಮ್ಮ ನಾಯಕ ಶಿಕಾಮಣಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ? ಹೋಗಲಿ, ಪ್ರತಿಪಕ್ಷ ನಾಯಕರನ್ನಾಗಿ ಮಾಡುವ ಅವಕಾಶವೂ ಇತ್ತು. ಅದನ್ನು ಮಾಡಲಿಲ್ಲ ಯಾಕಪ್ಪಾ ಜಮೀರ್?’ ಎಂದು ಕಿಡಿಕಾರಿದೆ.
ಇಬ್ರಾಹಿಂ ಅವರನ್ನು ನಾವು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಪಕ್ಷಕ್ಕೆ ಬಂದಾಗ ಪ್ರೀತಿಯಿಂದ ಬರ ಮಾಡಿಕೊಂಡಿದ್ದೇವೆ. ಈಗ ಅವರು ನಮ್ಮ ಅಧ್ಯಕ್ಷರು. ನಿಮ್ಮ ಗಂಜಿ ಕೇಂದ್ರವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಮುಸ್ಲಿಂ ನಾಯಕ ಪಕ್ಷದ ಅಧ್ಯಕ್ಷರಾಗುವುದು ಸಾಧ್ಯವೇ? ಕಾಮಾಲೆ ಕಣ್ಣಲ್ಲಿ ಕೆಂಡ ಸುರಿದುಕೊಂಡರೆ ಯಾರಿಗೆ ನಷ್ಟ? ಎಂದು ಜಮೀರ್ ವಿರುದ್ಧ ಜೆಡಿಎಸ್ ದೂರಿದೆ.
‘ಇಬ್ರಾಹಿಂ ಅವರ ಪುತ್ರನ ಬಗ್ಗೆ ವಿಷಕಾರುವ ಕೆಟ್ಟ ಪ್ರಯತ್ನ ಮಾಡಿದ್ದೀರಿ. ಹುಮನಾಬಾದ್ನಲ್ಲಿ ಯುವಕ ಸಿಎಂ ಫಯಾಜ್ ಗೆದ್ದೇ ಗೆಲ್ಲುತ್ತಾರೆ. ನಿಮಗೂ ಈ ವಿಷಯ ಚೆನ್ನಾಗಿ ಗೊತ್ತು. ಪಂಚರತ್ನ ರಥಯಾತ್ರೆ ಈ ಕ್ಷೇತ್ರದಲ್ಲಿ ಹೇಗೆ ಅಬ್ಬರಿಸಿತು ಎನ್ನುವ ಮಾಹಿತಿ ಪಡೆದುಕೊಳ್ಳಿ. ಜಮೀರ್, ನಿಮ್ಮದೆ ಸಮುದಾಯದ ತರುಣನ ಮೇಲೆ ಈ ಪರಿಯ ಮತ್ಸರ ಏಕೆ’ ಎಂದು ಜೆಡಿಎಸ್ ಪ್ರಶ್ನಿಸಿದೆ.
ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮುಗಿಸಲು ಹೊರಟಿದ್ದು ಸುಳ್ಳಾ? ನಿಮ್ಮ ರೀತಿ ಇಬ್ರಾಹಿಂ ಅವರು ರಾಜಕೀಯದಲ್ಲಿ ಸಭ್ಯತೆಯ ಎಲ್ಲೆ ಮೀರಿದವರಲ್ಲ. ಆದರೆ, ಸಭ್ಯತೆಯ ಗಂಧಗಾಳಿ ಗೊತ್ತಿಲ್ಲದ ನಿಮಗೆ ರಾಜಕೀಯ ಜನ್ಮಕೊಟ್ಟ ಮಾತೃಪಕ್ಷದ ಬಗ್ಗೆ ಇರುವ ಮತ್ಸರ ನಿಮ್ಮ ಕೊಳಕು ಮನಃಸ್ಥಿತಿಗೆ ಹಿಡಿದ ಕನ್ನಡಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಇಬ್ರಾಹಿಂ ಅವರನ್ನು ಕಾಂಗ್ರೆಸ್ನಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಂತೆ, ಈಗ ಅವರ ಮಗನ ವಿಷಯದಲ್ಲೂ ದುಷ್ಟತಂತ್ರ ಹೂಡಲು ಹೊರಟಿದ್ದೀರಿ. ಸಿದ್ದಹಸ್ತನ ಜತೆ ಸೇರಿ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಮುಗಿಸಿದ ಮಿಸ್ಟರ್ ಜಮೀರ್, ಮುಸ್ಲಿಂ ಸಮುದಾಯಕ್ಕೆ ನಿಮಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ. ಸಮುದಾಯಕ್ಕೆ ಈ ಸತ್ಯ ಅರ್ಥವಾಗಿದೆ ಎಂದು ಜೆಡಿಎಸ್ ಕುಟುಕಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.