
ಬೆಳಗಾವಿ ಅಧಿವೇಶನ (ಪ್ರಾತಿನಿಧಿಕ ಚಿತ್ರ)
ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸುವ ಉದ್ದೇಶದಿಂದ ರೂಪಿಸಿರುವ ಕಾಯ್ದೆ ಮತ್ತು ಆದೇಶಗಳನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕು’ ಸೇರಿದಂತೆ ಒಟ್ಟು ಏಳು ನಿರ್ಣಯಗಳಿಗೆ ವಿಧಾನಸಭೆಯು ಗುರುವಾರ ಅಂಗೀಕಾರ ನೀಡಿತು.
ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ತೆಗೆದುಕೊಂಡ ಈ ನಿರ್ಣಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ನಿಮಗೆ (ರಾಜ್ಯ ಸರ್ಕಾರ) ಒಂದೇ ಒಂದು ಇಲಾಖೆಯನ್ನು ಇಲ್ಲಿನ ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ನೀವು ಮೊದಲು ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.
‘ಇಷ್ಟೊಂದು ನಿರ್ಣಯಗಳನ್ನು ಒಂದೇ ಬಾರಿಗೆ ತೆಗೆದುಕೊಳ್ಳುತ್ತೀರಲ್ಲ. ಇದೇನು ಈ ಸರ್ಕಾರದ ಕೊನೆ ಅಧಿವೇಶನವೇ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಕೆಣಕಿದರು.
‘ಕಲ್ಯಾಣ’ಕ್ಕೆ ಕೇಂದ್ರ ₹5,000 ಕೋಟಿ ಕೊಡಲಿ
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ರಾಷ್ಟ್ರೀಯ ಅಭಿವೃದ್ಧಿಯಾಗಿ ಪರಿಗಣಿಸಿ, ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರ ತಕ್ಷಣ ₹ 5 ಸಾವಿರ ಕೋಟಿಯ ‘ವಿಶೇಷ ಕೇಂದ್ರ ನೆರವು’ ಯೋಜನೆಯನ್ನು ರೂಪಿಸಿ ಬಿಡುಗಡೆ ಮಾಡಬೇಕು ಎಂಬ ನಿರ್ಣಯಕ್ಕೆ ಅಂಗೀಕಾರ ಪಡೆಯಲಾಯಿತು.
ಕೃಷ್ಣಾ ಮೇಲ್ದಂಡೆ ಯೋಜನೆ– 3 ಅನ್ನು ತಕ್ಷಣ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಜೊತೆಗೆ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ (ಬ್ರಿಜೇಶ್ ಕುಮಾರ್ ಆಯೋಗ) ಐತೀರ್ಪು ಅನ್ನು ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ ಅಧಿಸೂಚಿಸಿ ಅನುಷ್ಠಾನಗೊಳಿಸ ಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ರಾಯಚೂರು ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ತಕ್ಷಣವೇ ಅಂತಿಮ ಅನುಮೋದನೆ ನೀಡಬೇಕು
ಬೆಂಗಳೂರಿನಲ್ಲಿರುವ 73 ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು ಗುರುತಿಸಿ ಅವುಗಳಲ್ಲಿ ಕನಿಷ್ಠ 25 ಪ್ರಮುಖ ಸಂಸ್ಥೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾಯಿಸಬೇಕು
ಕರ್ನಾಟಕದ ನಿಜವಾದ ಎಥೆನಾಲ್ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋಟಾ ಹಂಚಿಕೆ ಪ್ರಮಾಣವನ್ನು ತಕ್ಷಣ ಹೆಚ್ಚಿಸುವ ಮೂಲಕ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸಬೇಕು.
ಮಹದಾಯಿ ಯೋಜನೆಗೆ ಅನುಷ್ಠಾನಕ್ಕೆ ಅಗತ್ಯವಾದ ಎಲ್ಲ ಮಂಜೂರಾತಿಗಳನ್ನು ತಕ್ಷಣ ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.