ADVERTISEMENT

ಸಿ.ಡಿ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಪರಿಷತ್‌ನಲ್ಲೂ ಕಾಂಗ್ರೆಸ್ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 9:21 IST
Last Updated 24 ಮಾರ್ಚ್ 2021, 9:21 IST
   

ಬೆಂಗಳೂರು: ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ. ಪ್ರಕರಣದ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಸಭಾಪತಿ ಪೀಠದ ಎದುರು ಬುಧವಾರ ಕಾಂಗ್ರೆಸ್ ಪಟ್ಟುಹಿಡಿದರು. ಬಳಿಕ 10 ನಿಮಿಗಳ ಕಾಲ ಸದನದ ಕಲಾಪ ಮುಂದೂಡಲಾಗಿತ್ತು.

ಸಿಡಿ ವಿಷಯ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ, ಸಿ.ಡಿ ಬಗ್ಗೆ ಚರ್ಚೆಗೆ ಈಗಲೇ ಅವಕಾಶ ಕೊಡುವಂತೆ ಪಟ್ಟು ಹಿಡಿದರು.

ನಿಯಮ 59ರ ಅಡಿ ಚರ್ಚೆಗೆ ನಾವು ಮನವಿ ಮಾಡಿದ್ದೇವೆ. ನೀವು 68ರ ಅಡಿ ಚರ್ಚೆಗೆ ಅವಕಾಶ ಕೊಟ್ಟಿದ್ದೀರಾ. ಈಗಲೇ ಚರ್ಚೆ ಮಾಡಿ ಎಂದು ಪಾಟೀಲ ಆಗ್ರಹಿಸಿದರು. ಕಾರ್ಯಸೂಚಿಯಂತೆ ಕಲಾಪ ಮುಗಿಸೋಣ. ನಂತರ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಪತಿ ಹೇಳಿದರು.

ADVERTISEMENT

'ಸಿ.ಡಿಯನ್ನು ಜಗತ್ತು ನೋಡಿದೆ. ಈಗಾಗಲೇ ವಿಧಾನಸಭೆಯಲ್ಲಿ ಚರ್ಚೆ ಆಗಿದೆ.‌ ಇಲ್ಲೂ ಅವಕಾಶ ಕೊಡಿ. ಇದು ಅತ್ಯಂತ ಜರೂರು, ಅತ್ಯಂತ ಮಹತ್ವದ ವಿಚಾರ ಎಂದೂ ಪಾಟೀಲ ಒತ್ತಾಯಿಸಿದರು.

ಬಿಜೆಪಿಗೆ ಧಿಕ್ಕಾರ, ಡೌನ್ ಡೌನ್ ಬಿಜೆಪಿ ಎಂದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ನೀತಿ, ನಾಚಿಕೆ ಇಲ್ಲದ ಸರ್ಕಾರ ಇದು ದೂರಿದರು. ಆಗ ಬಿಜೆಪಿ ಸದಸ್ಯರು, ಸಿಡಿ ಮಾಡಿದ ಕಾಂಗ್ರೆಸ್‌ಗೆ ಧಿಕ್ಕಾರ ಎಂದು ಕೂಗಿದರು.

ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಬಿಗಿ ಪಟ್ಟು ಹಿಡಿದ ಕಾರಣ ಸಭಾಪತಿ ಕಲಾಪವನ್ನು‌ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.