ADVERTISEMENT

ಯತ್ನಾಳ ಸ್ವಯಂಘೋಷಿತ ನಾಯಕ: ಮುರುಗೇಶ ನಿರಾಣಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 23:30 IST
Last Updated 12 ಡಿಸೆಂಬರ್ 2023, 23:30 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ನವದೆಹಲಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಯಂಘೋಷಿತ ನಾಯಕ. ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದುರುದ್ದೇಶದಿಂದ ಟೀಕೆ ಮಾಡುತ್ತಿರುವ ಯತ್ನಾಳ ಅವರಿಗೆ ಸಮಾಜ ಹಾಗೂ ಪಕ್ಷ ತಕ್ಕ ಪಾಠ ಕಲಿಸಲಿದೆ ಎಂದು ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಹೇಳಿದರು. 

ಮಂಗಳವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ತಮ್ಮನ್ನು ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಾಡಬೇಕು ಎಂದು ಯತ್ನಾಳ ಹೇಳಿಕೊಂಡು ಓಡಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರನ್ನು ತಾರಾ ಪ್ರಚಾರಕರನ್ನಾಗಿ ಮಾಡಲಾಯಿತು. ಅವರ ಓಡಾಟಕ್ಕೆ ಹೆಲಿಕಾಪ್ಟರ್‌ ವ್ಯವಸ್ಥೆ ಕಲ್ಪಿಸಲಾಯಿತು. ಅವರು ಪ್ರಚಾರ ಮಾಡಿದ 40 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇ ಇಲ್ಲ’ ಎಂದು ವ್ಯಂಗ್ಯವಾಡಿದರು. 

‘ವಿಜಯಪುರ ಜಿಲ್ಲೆಯಲ್ಲೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನಾಳಗೆ ಆಗಲಿಲ್ಲ. ಪಕ್ಷದ ನಾಯಕರ ವಿರುದ್ಧ ಟೀಕೆ ಮಾಡುವ ಮೂಲಕ ನಾಯಕರಾಗಲು ಹೊರಟಿದ್ದಾರೆ. ಈ ಹಿಂದೆ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ ಅವರಿಗೆ ಶೆಟ್ಟಿ, ಭಟ್ಟ ಎಂದು ನಿಂದಿಸಿದರು. ಬಳಿಕ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಹಾಗೂ ವಿಜಯ ಸಂಕೇಶ್ವರ ವಿರುದ್ಧ ಮಾತನಾಡಿದರು. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಅದೇ ರೀತಿ ಯತ್ನಾಳ ಕಥೆಯೂ ಆಗಲಿದೆ’ ಎಂದು ಅವರು ಎಚ್ಚರಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.