ಬೆಳಗಾವಿ (ಸುವರ್ಣ ವಿಧಾನಸೌಧ): ‘ಖಾಸಗಿ ವೈದ್ಯಕೀಯ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳನ್ನು ಮಾಪ್ ಅಪ್ ಸುತ್ತಿನ ಬಳಿಕ ಹಿಂದಿರುಗಿಸುವವರ ಮೇಲೆ ದೊಡ್ಡ ಮೊತ್ತದ ದಂಡ ವಿಧಿಸುವ ಜೊತೆಗೆ, ಕಟ್ಟುನಿಟ್ಟಿನ ನೀತಿ ರೂಪಿಸಲು ಉದ್ದೇಶಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ವಿಧಾನಪರಿಷತ್ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎನ್. ರವಿಕುಮಾರ್, ‘2019–2020 ಮತ್ತು 2020–21ನೇ ಸಾಲಿನಲ್ಲಿ ಸರ್ಕಾರಿ ಕೋಟಾದ 1,227 ವೈದ್ಯಕೀಯ ಸೀಟುಗಳನ್ನು ಖಾಸಗಿಯವರಿಗೆ ಹಿಂದಿರುಗಿಸಲಾಗಿದೆ. 2021–22ರ ಸಾಲಿನಲ್ಲಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರ ವಾಪಸು ಪಡೆದು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟುಗಳನ್ನು ಕೌನ್ಸೆಲಿಂಗ್ ಮೂಲಕ ಹಂಚಿಕೆಯ ಆಯ್ಕೆಗೆ ಅವಕಾಶ ಮಾಡಿಕೊಡುವ ಕುರಿತು ಸರ್ಕಾರದ ನಿಲುವೇನು’ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ‘ಮೂರು ಹಂತಗಳಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಕಾಲೇಜಿಗೆ ದಾಖಲಾಗದೇ ಇದ್ದರೆ ಎರಡನೇ ಸುತ್ತಿನಲ್ಲಿ ತಮ್ಮ ಸೀಟನ್ನು ಬೇರೆಯವರಿಗೆ ಬಿಟ್ಟುಕೊಡಲು ಅವಕಾಶ ಇದೆ. ಅದೇ ರೀತಿ ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಮಾಪ್ ಅಪ್ ಸುತ್ತಿಗೆ ಮೊದಲು ಬಿಟ್ಟುಕೊಡಲು ಅವಕಾಶ ಇದೆ.ಮಾಪ್ ಅಪ್ ಸುತ್ತಿನಲ್ಲಿ ಸೀಟು ಪಡೆದುಕೊಂಡವರು ದಾಖಲಾಗಲೇಬೇಕು. ಇಲ್ಲದೇ ಇದ್ದರೆ ದಂಡ ಕಟ್ಟಬೇಕಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.