ADVERTISEMENT

ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ–ಡಿಸಿಎಂ ಕರ್ತವ್ಯ ಅಧಿಕಾರಿಗಳ ‘ಬೂಟಿನ‘ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 15:34 IST
Last Updated 25 ಜುಲೈ 2025, 15:34 IST
ದೆಹಲಿ ಕರ್ನಾಟಕ ಭವನ
ದೆಹಲಿ ಕರ್ನಾಟಕ ಭವನ   

ನವದೆಹಲಿ: ಅಧಿಕಾರ ಹಸ್ತಾಂತರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದ್ದರೆ, ಅವರ ಆಪ್ತ ಅಧಿಕಾರಿಗಳಿಬ್ಬರು ರಾಷ್ಟ್ರ ರಾಜಧಾನಿಯಲ್ಲಿ ಬಹಿರಂಗವಾಗಿ ಜಟಾಪಟಿ ನಡೆಸಿದ್ದಾರೆ. 

ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯ ಅಧಿಕಾರಿಯೂ ಆಗಿರುವ ಕರ್ನಾಟಕ ಭವನದ ಸಹಾಯಕ ನಿವಾಸಿ ಆಯುಕ್ತ ಮೋಹನ್‌ ಕುಮಾರ್ ಸಿ. ಹಾಗೂ ಶಿವಕುಮಾರ್ ಅವರ ವಿಶೇಷ ಅಧಿಕಾರಿ ಎಚ್‌.ಆಂಜನೇಯ ನಡುವಿನ ಗಲಾಟೆಯ ದೂರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಿವಾಸಿ ಆಯುಕ್ತರಿಗೆ ತಲುಪಿದೆ. ಮೋಹನ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ಆಂಜನೇಯ ದೂರಿತ್ತಿದ್ದಾರೆ. 

‘ಸಹಾಯಕ ನಿವಾಸಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಮೋಹನ್ ಅವರು ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಬೂಟು ಕಳಚಿ ಹೊಡೆಯುತ್ತೇನೆ ಎಂದು ಅವರ ಕಚೇರಿಯಲ್ಲಿ ಬೆದರಿಕೆ ಹಾಕಿದ್ದರು. ಕಚೇರಿಯ ಹೊರ ಆವರಣದಲ್ಲಿ ಎಲ್ಲರ ಎದುರಿಗೆ ನನಗೆ ಹೊಡೆಯಲು ಬಂದಿದ್ದಾರೆ. ನನಗೆ ಏನಾದರೂ ಅಪಘಾತವಾದರೆ ಮೋಹನ್‌ ಅವರೇ ಹೊಣೆ’ ಎಂದು ಆಂಜನೇಯ ದೂರಿನಲ್ಲಿ ತಿಳಿಸಿದ್ದಾರೆ. 

ADVERTISEMENT

‘ಈ ಅಧಿಕಾರಿಯು ಈ ಹಿಂದೆ ಎಂ.ಎಂ. ಜೋಷಿ ಅವರಿಗೆ ಹಲ್ಲೆ ಮಾಡಿದ್ದರು. ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಎಂಬ ಅಹಂನಲ್ಲಿ ತಾನು ಹೇಳಿದ ರೀತಿಯಲ್ಲಿ ಕರ್ನಾಟಕ ಭವನದ ಆಡಳಿತ ನಡೆಯಬೇಕು ಎಂದು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಕಚೇರಿ ಅಧೀಕ್ಷಕ–ಆಡಳಿತ ಹುದ್ದೆಯಿಂದ ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ. ಸೇವಾ ಹಿರಿತನದಲ್ಲಿ ಹಿರಿಯನಿದ್ದರೂ ಲೆಕ್ಕಾಧಿಕಾರಿಯಾಗಿ (ಪ್ರಭಾರ) ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಾರೆ. ಹೀಗಾಗಿ, ಅವರ ಸೇವಾ ಅವಧಿಯಲ್ಲಿ ನಡೆದಿರುವ ಇಲಾಖಾ ವಿಚಾರಣೆ, ಮುಂಬಡ್ತಿ ಪಡೆದಿರುವ ಕುರಿತು ವಿಚಾರಣೆ ನಡೆಸಬೇಕು ಹಾಗೂ ಏಕವಚನದಲ್ಲಿ ನಿಂದಿಸಿ ನನ್ನ ಮಾನ ಮರ್ಯಾದೆ ಕಳೆದಿರುವ ಬಗ್ಗೆಯೂ ವಿಚಾರಣೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

‘ಇಬ್ಬರ ನಡುವೆ ಏನೋ ಆಗಿದೆಯಂತೆ. ಈ ಬಗ್ಗೆ ನನಗೂ ಕೆಲವರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. 

‘ಆಂಜನೇಯ ಮೊನ್ನೆ ಕಚೇರಿಗೆ ಬಂದಿದ್ದರು. ಈ ವೇಳೆಗೆ, ನನಗೆ ಜನ್ಮದಾತ ಎಂದು ವ್ಯಂಗ್ಯವಾಗಿ ಹೇಳಿದರು. ದೂರವಾಣಿ ಕರೆಯಲ್ಲಿದ್ದ ಕಾರಣ ನಾನು ಗಮನಿಸಿರಲಿಲ್ಲ. ಬಳಿಕ ಹೊರಹೋದರು. ಕಚೇರಿಯ ಸಿಬ್ಬಂದಿಯೊಬ್ಬರು ಈ ವಿಷಯವನ್ನು ಗಮನಕ್ಕೆ ತಂದರು. ಬಳಿಕ ಆಂಜನೇಯ ಅವರನ್ನು ಕರೆಸಿ ವಿವರಣೆ ಕೇಳಿದೆ. ಬೂಟ್‌ನಿಂದ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿಲ್ಲ’ ಎಂದು ಮೋಹನ್‌ ಕುಮಾರ್ ಸ್ಪಷ್ಟಪಡಿಸಿದರು. 

‘ಭವನದ ಮಹಿಳೆಯರ ಜತೆಗೆ ಆಂಜನೇಯ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಮಹಿಳಾ ಸಿಬ್ಬಂದಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.