ವಕ್ಫ್ ಮಂಡಳಿಯ ಭೂಕಬಳಿಕೆ ವಿರೋಧಿಸಿ, ಯತ್ನಾಳ ನೇತೃತ್ವದ ಬಿಜೆಪಿಯವರು ಬೆಳಗಾವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಹೋರಾಟ ಸಮಾವೇಶ
ಬೆಳಗಾವಿ: ‘ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಲು ನಿಮ್ಮನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಹುಷಾರ್!’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಬಿ.ವೈ.ವಿಜಯೇಂದ್ರ ಅವರಿಗೆ ಎಚ್ಚರಿಕೆ ಕೊಟ್ಟರು.
ವಕ್ಫ್ ಮಂಡಳಿಯ ಭೂಕಬಳಿಕೆ ವಿರೋಧಿಸಿ, ಯತ್ನಾಳ ನೇತೃತ್ವದ ಬಿಜೆಪಿಯವರು ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಹೋರಾಟ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವಕ್ಫ್ ಮಂಡಳಿಯ ಭೂಕಬಳಿಕೆ ವಿರುದ್ಧದ ಹೋರಾಟ ಜನಪರವಾದದ್ದು. ಇದರ ನೇತೃತ್ವ ವಹಿಸಿದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇನೆ ಎನ್ನುತ್ತೀರಾ?’ ಎಂದು ಪ್ರಶ್ನಿಸಿದ ಅವರು, ‘ರಾಜ್ಯದಲ್ಲಿ ಉಪಚುನಾವಣೆ ಮುಗಿದು ಬಹಳ ದಿನಗಳಾಯಿತು. ಇನ್ನಾದರೂ ನಮ್ಮ ಜತೆಗೆ ಸೇರಿಕೊಂಡು, ವಕ್ಫ್ ಮಂಡಳಿ ವಿರುದ್ಧ ರಸ್ತೆಗಿಳಿದು ಹೋರಾಟಕ್ಕೆ ಬನ್ನಿ. ನಮ್ಮೊಂದಿಗೆ ಬರಲು ಇಷ್ಟ ಇಲ್ಲದಿದ್ದರೆ ನೀವೇ ಪ್ರತ್ಯೇಕವಾಗಿ ಹೋರಾಡಿ. ನಮ್ಮ ಪಾಲಿಗೆ ನಾವು ಹೋರಾಟ ಮಾಡಿ’ ಎಂದರು.
‘ಜನಪರವಾಗಿ ಕೆಲಸ ಮಾಡಲೆಂದು ನಿಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರೆ, ನೀವು ಹಾದಿಬೀದಿಯಲ್ಲಿ ನಿಂತು ಮಾತನಾಡುತ್ತೀರಾ? ನಾವು ಹಾದಿಬೀದಿಯಲ್ಲಿ ನಿಂತು ಹೇಳಿಕೆ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ಕುಳಿತು ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ. ಇದು ಪಕ್ಷಕ್ಕೂ ಹಾಗೂ ನಿಮಗೂ ಗೌರವ ತರವುದಿಲ್ಲ. ನೀವು ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ನಾವು ಇಂದು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ತಾವು ಚುನಾವಣೆಯಲ್ಲಿ ಏನೇನು ಮಾಡಿದ್ದೀರಿ ಎಂದು ಹೇಳುವ ಸಂದರ್ಭ ಇದಲ್ಲ. ಜನರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ನೀವು ಜನರ ಜತೆಗೆ ಹೋರಾಟಕ್ಕೆ ಇಳಿಯಿರಿ. ಆಗ ಶಹಬ್ಬಾಸ್ ಎನ್ನುತ್ತೇವೆ’ ಎಂದು ಹೇಳಿದರು.
10 ಲಕ್ಷ ಜನರನ್ನು ಸೇರಿಸುತ್ತೇವೆ
ಶಾಸಕ ರಮೇಶ ಜಾರಕಿಹೊಳಿ, ‘ವಕ್ಫ್ ವಿರುದ್ಧದ ಹೋರಾಟದ ಕೊನೆಗೆ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ಅಲ್ಲಿ 10 ಲಕ್ಷ ಜನರನ್ನು ಸೇರಿಸುತ್ತೇವೆ. ಬೆಳಗಾವಿಯಿಂದ 1 ಲಕ್ಷ ಜನರನ್ನು ಕರೆದೊಯ್ಯುತ್ತೇವೆ. ಸಮಾವೇಶಕ್ಕೆ ಸಾಕಷ್ಟು ಖರ್ಚಾಗುತ್ತದೆ. ಈ ಪೈಕಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರಿಂದ ₹1 ಕೋಟಿ ನಿಧಿ ನೀಡುತ್ತೇವೆ. ನಾನು, ಯತ್ನಾಳ ಸೇರಿ ನಾಯಕರೇ ಸಮಾವೇಶಕ್ಕೆ ಬೇಕಿರುವ ಹಣ ಕೊಡಬಹುದಿತ್ತು. ಹಾಗೆ ಮಾಡಿದರೆ ನಾವು ‘ಪೂಜ್ಯ ತಂದೆ, ಪೂಜ್ಯ ಮಗ’ ಆಗುತ್ತೇವೆ. ಹಾಗಾಗಿ ಕಾರ್ಯಕರ್ತರಿಂದ ಹಣ ಸಂಗ್ರಹಿಸುತ್ತೇವೆ’ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, 'ರಮೇಶ ಜಾರಕಿಹೊಳಿ ಆಪರೇಷನ್ ಮಾಡಿದ್ದರಿಂದ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಗ ನಮ್ಮನ್ನು ಆಪರೇಷನ್ ಮಾಡುತ್ತಾರಂತೆ. ಇಡೀ ರಾಜ್ಯದಲ್ಲಿ ಆಪರೇಷನ್ ಮಾಡುವಲ್ಲಿ ನಾವು ಟಾಪ್ಮೋಸ್ಟ್ ಡಾಕ್ಟರ್ಗಳಿದ್ದೇವೆ. ನಮ್ಮನ್ನು ಆಪರೇಷನ್ ಮಾಡಿದರೆ ನಿಮ್ಮ ನರನಾಡಿಗಳನ್ನೇ ಕಟ್ ಮಾಡುತ್ತೇವೆ’ ಎಂದು ಪರೋಕ್ಷವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದರು.
‘ಬೆಳಗಾವಿಯಲ್ಲಿನ ಸಮಾವೇಶವು ರಮೇಶ ಜಾರಕಿಹೊಳಿ ಅವರ ತಾಕತ್ತಿನ ಟ್ರೇಲರ್ ಅಷ್ಟೇ. ದಾವಣಗೆರೆಯಲ್ಲಿ ಪಿಕ್ಚರ್ ಇನ್ನೂ ಬಾಕಿ ಹೈ’ ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ ಮತ್ತು ಲಿಂಬಾವಳಿ ಅವರೂ ದಾವಣಗೆರೆಯ ಸಮಾವೇಶಕ್ಕೆ ಕಾರ್ಯಕರ್ತರ ಮೂಲಕ ತಲಾ ₹1 ಕೋಟಿ ನೀಡುವುದಾಗಿ ತಿಳಿಸಿದರು.
ಗೋಪ್ಯ ಸಭೆ: ಸಮಾವೇಶಕ್ಕೂ ಮುನ್ನ, ನಗರದ ಹೊಟೇಲ್ನಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ ಮತ್ತಿತರರು ಗೋಪ್ಯ ಸಭೆ ನಡೆಸಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.