ADVERTISEMENT

ಉಪಚುನಾವಣೆಗೆ ದಿನಗಣನೆ: ಮತ್ತೆ ‘ಮೈತ್ರಿ’ಯ ಜಪ

ಯಡಿಯೂರಪ್ಪ ಸರ್ಕಾರ ಬೀಳಿಸುವುದಿಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:39 IST
Last Updated 1 ಡಿಸೆಂಬರ್ 2019, 19:39 IST
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಉಪಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್‌–ಜೆಡಿಎಸ್ ಮರುಮೈತ್ರಿಯ ವಿಚಾರ ರಾಜಕೀಯ ಅಂಗಳದಲ್ಲಿಮತ್ತೆ ಮುಂಚೂಣಿಗೆ ಬಂದಿದೆ.

‘ಉಪಚುನಾವಣೆ ಫಲಿತಾಂಶ ಡಿಸೆಂಬರ್ 9ರಂದು ಪ್ರಕಟವಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣವಾಗಲಿದ್ದು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ’ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದಾರೆ. ಮಹಾರಾಷ್ಟ್ರದಲ್ಲಿ ವಾರಾಂತ್ಯ ನಡೆದ ರಾಜಕೀಯ ಸ್ಥಿತ್ಯಂತರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಫಲಿತಾಂಶದ ಬಳಿಕ ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿರುವುದು ರಾಜಕೀಯ ವಲಯದಲ್ಲಿ ಭಿನ್ನಬಗೆಯ ವಿಶ್ಲೇಷಣೆಗೆ ಕಾರಣವಾಗಿದೆ.

ಖರ್ಗೆ ಹೇಳಿಕೆ ಬೆನ್ನಲ್ಲೇ, ಸ್ಪಷ್ಟನೆ ನೀಡಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ‘ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೀಳಿಸುವುದಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ನಡೆಸಲು ಬಿಡದೆ ಯಾವ ರೀತಿಯಲ್ಲಿ ಹಿಂಸೆ ಕೊಟ್ಟರು ಎಂಬುದು ಗೊತ್ತಿದೆ. ಮತ್ತೆ ಮೈತ್ರಿ ಮಾಡಿಕೊಂಡು, ಮತ್ತೊಂದು ತಪ್ಪು ಮಾಡಲಾರೆ’ ಎಂದಿದ್ದಾರೆ.

ADVERTISEMENT

‘ಫಲಿತಾಂಶದ ನಂತರರಾಜಕೀಯ ಪರಿಸ್ಥಿತಿ ಬದಲಾಗಲಿದೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಗೌಡರ ಪುತ್ರಎಚ್.ಡಿ. ಕುಮಾರಸ್ವಾಮಿಹೇಳಿದ್ದಾರೆ.

***

ಡಿಸೆಂಬರ್ 9ರ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ

– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಆರು ತಿಂಗಳಲ್ಲಿ ನಮ್ಮ ಸರ್ಕಾರ ಬಿದ್ದು ಹೋಗಿ, ಚುನಾವಣೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ

- ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಫಲಿತಾಂಶದ ಬಳಿಕ ರಾಜ್ಯ ರಾಜಕಾರಣ<br/>ದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಗೋಕಾಕ ಕ್ಷೇತ್ರದ ಅಶೋಕ್ ಪೂಜಾರಿ ಮಂತ್ರಿಯಾಗಲಿದ್ದಾರೆ‌

- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಉಪಚುನಾವಣೆ ನಂತರ ಜೆಡಿಎಸ್ ಸಹಕಾರದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಫಲಿತಾಂಶದ ದಿನ ಸಿಹಿ ಸುದ್ದಿ ಕೊಡಲಾಗುವುದು

– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.