ADVERTISEMENT

ಉಪಚುನಾವಣೆ ಮಧ್ಯಾಹ್ನ 3ರವರೆಗಿನ ಮತದಾನ: ರಾಮನಗರ ಶೇ 54, ಜಮಖಂಡಿಯಲ್ಲಿ ಶೇ58.82

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 10:41 IST
Last Updated 3 ನವೆಂಬರ್ 2018, 10:41 IST
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಂಪ್ಲಿ‌ ವಿಧಾನಸಭಾ ಕ್ಷೇತ್ರದ ಕಪ್ಪಗಲ್ಲು ಗ್ರಾಮದ‌ 216 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅತ್ಯಧಿಕ ಸಂಖ್ಯೆಯಲ್ಲಿ ಸಾಲುಗಟ್ಟಿದ್ದ ಮಹಿಳಾ ಮತದಾರರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಂಪ್ಲಿ‌ ವಿಧಾನಸಭಾ ಕ್ಷೇತ್ರದ ಕಪ್ಪಗಲ್ಲು ಗ್ರಾಮದ‌ 216 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅತ್ಯಧಿಕ ಸಂಖ್ಯೆಯಲ್ಲಿ ಸಾಲುಗಟ್ಟಿದ್ದ ಮಹಿಳಾ ಮತದಾರರು.   

ಬೆಂಗಳೂರು:ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶನಿವಾರ ಸಣ್ಣಪುಟ್ಟ ತೊಡಕುಗಳನ್ನು ಬಿಟ್ಟು ಉಳಿಂದತೆ ಮಧ್ಯಾಹ್ನದ ವರೆಗೆಶಾಂತಿಯುತವಾಗಿ ನಡೆದಿದೆ.

ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳು; ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸುತ್ತಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಾಹ್ನ 3ರ ವರೆಗಿನ ವರದಿಯಂತೆ ಮತದಾನದ ಶೇಕಡಾ ವಾರು ಇಂತಿದೆ.

ADVERTISEMENT

* ರಾಮನಗರದಲ್ಲಿ ಶೇಕಡಾ 54ರಷ್ಟು ಮತದಾನವಾಗಿದೆ. ಈವರೆಗೆ 241 ಅಂಗವಿಕಲರು ಮತದಾನ ಮಾಡಿದ್ದಾರೆ.

* ಜಮಖಂಡಿಯಲ್ಲಿ ಶೇ 58.82ರಷ್ಟು ಜನ ಹಕ್ಕು ಚಲಾವಣೆ ಮಾಡಿದ್ದಾರೆ.

* ಮಂಡ್ಯದಲ್ಲಿ ಶೇ 37.7ರಷ್ಟು ಮತದಾನವಾಗಿದೆ.

* ಬಳ್ಳಾರಿಯಲ್ಲಿ ಶೇ 47ರಷ್ಡು ಮತದಾನವಾಗಿದೆ.

* ಶಿವಮೊಗ್ಗ ಶೇ 44ರಷ್ಟು ಮತದಾನವಾಗಿದೆ.

ಚುನಾವಣೆಗೆ ಎರಡು ದಿನ ಇರುವಾಗ ರಾಮನಗರ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಮತ ಸಮರದಿಂದ ಪಲಾಯನ ಮಾಡಿ ಕಾಂಗ್ರೆಸ್‌ ಸೇರಿದ್ದು ಪಕ್ಷಕ್ಕೆ ಭಾರಿ ಮುಖಭಂಗ ಉಂಟುಮಾಡಿದೆ. ಕಾಂಗ್ರೆಸ್‌ ಸೇರಿರುವ ಚಂದ್ರಶೇಖರ್ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಬಿಜೆಪಿಯು ಕೇವಲ ಚಿಹ್ನೆಯನ್ನು ಮುಂದಿಟ್ಟುಕೊಂಡು ಮತಯಾಚಿಸುವಂತಾಗಿತ್ತು.

ಎರಡೂ ಕೈಗಳಿಲ್ಲದ ಯುವತಿ ಕಾಲಿನಿಂದ ಮತದಾನ ಮಾಡುವ ಮೂಲಕ ಗಮನಸೆಳೆದರು. ಅಂಗವಿಕಲೆ ಲಕ್ಷ್ಮೀದೇವಿ ಅವರು ಕೂಡ್ಲಿಗಿ ತಾಲ್ಲೂಕಿನ ಗುಂಡಮುಣಗು ಗ್ರಾಮದಲ್ಲಿನ ಮತಗಟ್ಟೆ 105ರಲ್ಲಿ ಹಕ್ಕು ಚಲಾವಣೆ ಮಾಡಿದರು.

ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನ ಹೊಳೆ ಬೆಳೆಗಲು ಗ್ರಾಮ ಹಾಗೂ ದೊಡ್ಡಮಟ್ಟಿ ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾಡಳಿತ ಉಚಿತವಾಗಿ ವಾಹನ ವ್ಯವಸ್ಥೆ ಮಾಡಿದೆ. ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಆಟೊ, ಟಂಟಂ, ಅಪೆ ವಾಹನಗಳಲ್ಲಿ ಕರೆತಂದು ಮತ ಹಾಕಿಸಿದರು. ಈ ಬಗೆಯ ವ್ಯವಸ್ಥೆ ಕಲ್ಪಿಸಿರುವುದು ದೇಶದಲ್ಲೇ ಮೊದಲು.

ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ತಮ್ಮ ಏಜೆಂಟರನ್ನು ಹಿಂಪಡೆದ ಕಾರಣ ಬಿಜೆಪಿಯ ಎಲ್ಲ ಚುನಾವಣಾ ಏಜೆಂಟರ ಮಾನ್ಯತೆಗಳು ರದ್ದಾಗಿವೆ. ಹೀಗಾಗಿ ಯಾವ ಮತಗಟ್ಟೆಯಲ್ಲೂ‌ ಪಕ್ಷದ ಏಜೆಂಟರನ್ನು ಒಳಬಿಟ್ಟಿಲ್ಲ.

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರಿಗೆ ಮತ ಚಲಾಯಿಸುವ ಪೊಟೊವನ್ನ ಕ್ಲಿಕ್ಕಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.