ADVERTISEMENT

ಎಂಜಲೆಲೆ ಮುಂದೆ ಕಚ್ಚಾಟ: ಜಗ್ಗೇಶ್‌ ವ್ಯಂಗ್ಯ

ಜೆಡಿಎಸ್‌–ಕಾಂಗ್ರೆಸ್‌ ಕಿತ್ತಾಡಿಕೊಳ್ಳುವ ಕಾಲ ದೂರವಿಲ್ಲ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 8:47 IST
Last Updated 7 ಜೂನ್ 2018, 8:47 IST
ಜಗ್ಗೇಶ್‌
ಜಗ್ಗೇಶ್‌   

ಮೈಸೂರು:ಮದುವೆ ಮನೆಯಲ್ಲಿ ಎಂಜಲೆಲೆ ಮುಂದೆ ಊಟಕ್ಕೆ ಹೊಡೆದಾಡುವಂತಹ ಪರಿಸ್ಥಿತಿ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಒದಗಿಬರಲಿದೆ ಎಂದು ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್‌ ನಗರದಲ್ಲಿ ಬುಧವಾರ ವ್ಯಂಗ್ಯವಾಡಿದ್ದಾರೆ.

ಬಿರಿಯಾನಿ, ಚಿಕನ್‌ ಕಬಾಬ್‌ ಎಲ್ಲವೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಟ್ಟೆಯಲ್ಲಿದೆ. ಕಾಂಗ್ರೆಸ್‌ನವರ ತಟ್ಟೆಯಲ್ಲಿ ಕೋಸಂಬರಿ, ಪಾನಕ ಇದೆ. ಇಬ್ಬರೂ ಜತೆಯಾಗಿ ಊಟಕ್ಕೆ ಕುಳಿತಿದ್ದಾರೆ. ಜೆಡಿಎಸ್‌ನವರು ಮೃಷ್ಟಾನ್ನ ಭೋಜನ ಮಾಡುವುದನ್ನು ನೋಡುತ್ತಾ ಕಾಂಗ್ರೆಸ್‌ನವರು ಸುಮ್ಮನಿರುತ್ತಾರೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ನೀವು ನೋಡ್ತಾ ಇರಿ. ಇಬ್ಬರೂ ಪರಸ್ಪರ ಕಿತ್ತಾಡಿಕೊಳ್ಳುವ ಕಾಲ ಶೀಘ್ರದಲ್ಲೇ ಬರಲಿದೆ. ಆ ಹೋರಾಟ ಹೇಗಿರಲಿದೆ ಎಂಬುದನ್ನು ನೋಡಲು ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದಾರೆ’ ಎಂದರು.

ADVERTISEMENT

ಈ ಸ್ಥಿತಿ ಬರಬಾರದಿತ್ತು:‘ಡಿ.ಕೆ.ಶಿವಕುಮಾರ್ ಅವರಿಗೆ ಒದಗಿರುವ ಸ್ಥಿತಿಯನ್ನು ನೋಡುವಾಗ ಅಯ್ಯೋ ಪಾಪಾ ಅನ್ನಿಸುತ್ತದೆ. ನನ್ನ ಆತ್ಮೀಯ ಗೆಳೆಯರಾದ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಬೇಕು ಎಂಬ ಆಸೆ ಇತ್ತು’ ಎಂದು ಹೇಳಿದರು.

ಶಿಸ್ತಿನ ಸಿಪಾಯಿಯಂತೆ ಪಕ್ಷಕ್ಕಾಗಿ ತನು, ಮನ, ಧನವನ್ನು ಖರ್ಚು ಮಾಡಿದರೂ, ಅವರಿಗೆ ಕೆಟ್ಟ ಸ್ಥಿತಿ ಎದುರಾಗಿದೆ. ಹೊರಗಡೆ ನಗುತ್ತಾ, ಒಳಗಡೆ ಕೊರಗುತ್ತಿದ್ದಾರೆ. ‘ಒಳಿತು ಮಾಡೋ ಮನುಷ, ನೀ ಇರೋದು ಮೂರೇ ದಿವಸ’ ಎಂಬ ಸ್ಥಿತಿ ಇದೆ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.