ADVERTISEMENT

ಸಂಪುಟ ಸಭೆ: ಮೂರು‌ ಕಾಯ್ದೆಗಳ ತಿದ್ದುಪಡಿಗೆ ಮತ್ತೆ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 7:45 IST
Last Updated 1 ಅಕ್ಟೋಬರ್ 2020, 7:45 IST
   

ಬೆಂಗಳೂರು: ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಮತ್ತು ಕಾರ್ಮಿಕ ವಿವಾದಗಳ ಕಾಯ್ದೆಗಳ‌ ತಿದ್ದುಪಡಿ ಜಾರಿಗೆ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದಗಳ ತಿದ್ದುಪಡಿ ಜಾರಿಗೊಳಿಸಿ ನಾಲ್ಕು ತಿಂಗಳ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಆದರೆ, ಈ ತಿದ್ದುಪಡಿ ಮಸೂದೆಗಳಿಗೆ ವಿಧಾನಸಭೆಯ ಅಂಗೀಕಾರ ಮಾತ್ರ ದೊರಕಿದೆ . ವಿಧಾನ ಪರಿಷತ್ ಅಂಗೀಕಾರ ಬಾಕಿ ಇದೆ. ಕಾರ್ಮಿಕ ವಿವಾದಗಳು ಮತ್ತು ಇತರ ಕೆಲವು ಕಾನೂನುಗಳ (ಕರ್ನಾಟಕ ತಿದ್ದುಪಡಿ) ಮಸೂದೆ ವಿಧಾನ ಪರಿಷತ್ ನಲ್ಲಿ ಮತ ವಿಭಜನೆಯಲ್ಲಿ ತಿರಸ್ಕೃತಗೊಂಡಿದೆ.

ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ಜಾರಿಯಲ್ಲಿಡಲು ಮತ್ತು ಕಾರ್ಮಿಕ ಕಾಯ್ದೆಯ ತಿದ್ದುಪಡಿ ಜಾರಿಗೆ ಮತ್ತೆ ಸುಗ್ರೀವಾಜ್ಞೆ ಹೊರಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

₹ 4,636.50 ಕೋಟಿ ವೆಚ್ಚದಲ್ಲಿ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮೂಲಕ 150 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಕ್ರೀಡಾಪಟುಗಳನ್ನು ಪಿಎಸ್ಐ ಮತ್ತು ಡಿವೈಎಸ್ಪಿ ಹುದ್ದೆಗಳಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸುವ ವಿಶೇಷ ನಿಯಮಗಳು, ಮೌಲಾನಾ ಆಜಾದ್ ಟ್ರಸ್ಟ್ ಹಾಗೂ ಡಾ.ಜಗಜೀವನ್ ರಾಂ ಸಂಶೋಧನಾ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಪ್ರಸ್ತಾವಗಳಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.