
ಸಿದ್ದರಾಮಯ್ಯ
ಮೈಸೂರು: ‘ಹೈಕಮಾಂಡ್ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಹೇಳಿದರು.
‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಿಹಾರ ಮೂಲದ ಮುಖಂಡರು ಹೇಳಿದ್ದಾರಲ್ಲಾ’ ಎಂಬ ಪ್ರಶ್ನೆಗೆ ಗರಂ ಆದ ಅವರು, ‘ಮಾಧ್ಯಮದವರಿಗೆ ಇದು ಬಿಟ್ಟು ಬೇರೆ ವಿಷಯವಿಲ್ಲವೇ?’ ಎಂದು ಕೇಳಿದರು.
‘ಜನರು ಏನನ್ನಾದರೂ ಮಾತನಾಡುತ್ತಾರೆ. ಹೈಕಮಾಂಡ್ ಹೇಳಬೇಕಲ್ಲವೇ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್. ಅವರೇನಾದರೂ ಹೇಳಿದ್ದಾರೆಯೇ? ಜನರು ಮಾತನಾಡುವುದಕ್ಕಿಂತ ಮಾಧ್ಯಮದಲ್ಲೇ ಜಾಸ್ತಿ ಚರ್ಚೆ ಆಗುತ್ತಿದೆ. ಆ ಪ್ರಶ್ನೆ ಕೇಳುವ ಅಗತ್ಯವೇನಿದೆ’ ಎಂದು ಕೇಳಿದರು.
‘ಸಚಿವ ಸಂಪುಟ ಪುನರ್ರಚನೆ ಬಗ್ಗೆ ಬಿಹಾರ ಚುನಾವಣೆ ಮುಗಿದ ನಂತರ, ನವದೆಹಲಿಗೆ ಹೋಗಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ನ.15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಯಿಂದ ಇಬ್ಬರು ರೈತರು ಮೃತರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಿಜ ಹೇಳ್ಲಾ? ಅರಣ್ಯದಲ್ಲಿ ಜನರ ಓಡಾಟ ಜಾಸ್ತಿಯಾಗಿಬಿಟ್ಟಿದೆ. ರೆಸಾರ್ಟ್ಗಳಾಗಿವೆ. ಸಫಾರಿ ಜಾಸ್ತಿ ಆಗುತ್ತಿದೆ. ಕಾಡೊಳಗೆ ನೀರು ಮತ್ತು ಮೇವು ಇಲ್ಲದಿರುವುದು, ಚಿರತೆಗಳ ಹಾವಳಿ ಹೆಚ್ಚಿರುವುದು ಮೊದಲಾದ ಕಾರಣದಿಂದಾಗಿ ಕಾಡುಪ್ರಾಣಿಗಳು ಹೊರಗಡೆಗೆ ಬರುತ್ತಿವೆ’ ಎಂದು ತಿಳಿಸಿದರು.
‘ಅದನ್ನು ತಡೆಯುವ ಸಂಬಂಧ ಸಚಿವರಾದ ಈಶ್ವರ ಖಂಡ್ರೆ, ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಚಾಮರಾಜನಗರದಲ್ಲಿ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ನಾನೂ ಸಭೆ ನಡೆಸಲಿದ್ದೇನೆ’ ಎಂದು ಹೇಳಿದರು.
‘ಅಕ್ರಮ ರೆಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರೆಸಾರ್ಟ್ಗಳು ಜಾಸ್ತಿ ಆಗಿದ್ದರಿಂದಲೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ ಎಂಬುದೂ ಒಂದು ಕಾರಣವಷ್ಟೇ ಹೊರತು, ಅದೇ ಮುಖ್ಯ ಕಾರಣವಲ್ಲ. ಸಫಾರಿ ಟ್ರಿಪ್ ಕಡಿಮೆ ಮಾಡುವಂತೆಯೂ ಸೂಚಿಸಿದ್ದೇನೆ’ ಎಂದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ಡಿ.ರವಿಶಂಕರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.