ADVERTISEMENT

ವಾರಾಂತ್ಯ ಕರ್ಫ್ಯೂ: ಬಸ್‌ ಸಂಚಾರಕ್ಕೆ ತೊಂದರೆ ಇಲ್ಲ, ವಾರಾಂತ್ಯವೂ ಇರಲಿದೆ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:03 IST
Last Updated 5 ಜನವರಿ 2022, 19:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಎಂದಿನಂತೆ ಇರಲಿದ್ದು, ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಜನದಟ್ಟಣೆ ನೋಡಿಕೊಂಡು ಬಸ್‌ಗಳ ಕಾರ್ಯಾಚರಣೆ ಮಾಡಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

‘ರಾತ್ರಿ ಸಾರಿಗೆ ಸೇವೆಗೆ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಅಳವಡಿಸಿಕೊಂಡು ಮುಂಗಡ ಕಾಯ್ದಿರಿಸಿದ ಪ್ರಯಾಣಿಕರ ಸಂಖ್ಯೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾತ್ರ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು. ಕೇರಳ, ಮಹಾರಾಷ್ಟ್ರ ಮತ್ತು ಗೋವಾದಿಂದ ರಾಜ್ಯಕ್ಕೆ ಪ್ರಯಾಣಿಸುವವರು 72 ಗಂಟೆಗಳ ಒಳಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್ ವರದಿ ಪಡೆಯುವುದು ಕಡ್ಡಾಯ’ ಎಂದು ಸ್ಪಷ್ಟಪಡಿಸಿದ್ದಾರೆ.

ವಾರಾಂತ್ಯವೂ ಇರಲಿದೆ ಮೆಟ್ರೊ

ADVERTISEMENT

ವಾರಾ೦ತ್ಯದ ಕರ್ಫ್ಯೂ ಜಾರಿಯಲ್ಲಿರುವಾಗಲೂ ‘ನಮ್ಮ ಮೆಟ್ರೊ’ ಸೇವೆ ಮುಂದುವರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ.

‘ರೈಲು ಸಂಚಾರದ ಸಮಯವನ್ನು ಪರಿಷ್ಕರಿಸಲಾಗಿದೆ.ನಾಗಸ೦ದ್ರ, ರೇಷ್ಮೆ ಸ೦ಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ಟರ್ಮಿನಲ್‌ ನಿಲ್ದಾಣಗಳಿ೦ದಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಮೆಟ್ರೊ ರೈಲು ಸೇವೆ ಇರಲಿದೆ. ಟರ್ಮಿನಲ್‌ ನಿಲ್ದಾಣಗಳಿಂದ ಪ್ರತಿ 20 ನಿಮಿಷಗಳಿಗೆ ಒಂದು ರೈಲು ಹೊರಡಲಿದೆ. ಟರ್ಮಿನಲ್‌ ನಿಲ್ದಾಣದಿಂದ ದಿನದ ಕೊನೆಯ ರೈಲು ರಾತ್ರಿ 9 ಗ೦ಟೆಗೆ ಹೊರಡಲಿದೆ’ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

‘ಸೋಮವಾರದಿಂದ ಗುರುವಾರದವರೆಗೆ ಮೆಟ್ರೊ ಸೇವೆ ಈಗಿನಂತೆಯೇ ಮುಂದುವರಿಯಲಿದೆ. ಈ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಟರ್ಮಿನಲ್‌ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ದಿನದ ಕೊನೆಯ ರೈಲುಗಳು ಹೊರಡಲಿವೆ. ರಾತ್ರಿ 10 ಗ೦ಟೆಯ ನ೦ತರ ರೈಲುಗಳ ಸಂಖ್ಯೆ ಕಡಿಮೆ ಇರಲಿದೆ. ಟರ್ಮಿನಲ್‌ ನಿಲ್ದಾಣಗಳಿಂದ ಶುಕ್ರವಾರದ ಕೊನೆಯ ರೈಲು ರಾತ್ರಿ 11ರ ಬದಲು ರಾತ್ರಿ 10 ಗ೦ಟೆಗೆ ಹೊರಡಲಿದೆ’ ಎಂದು ನಿಗಮವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.