ADVERTISEMENT

Covid-19 Karnataka Update: ಶುಕ್ರವಾರ 35,879 ಮಂದಿ ಕೋವಿಡ್‌ನಿಂದ ಗುಣಮುಖ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:24 IST
Last Updated 14 ಮೇ 2021, 19:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಕೋವಿಡ್ ಪೀಡಿತರ ಸಂಖ್ಯೆ ಶುಕ್ರವಾರ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 41,779 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ಒಂದು ದಿನ ಅವಧಿಯಲ್ಲಿ 1.27 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣವು ಶೇ 32.86ರಷ್ಟಿದೆ. 11 ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, 14,316 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಸದ್ಯ 5.98 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 121 ಮಂದಿ ಸೇರಿದಂತೆ ರಾಜ್ಯದಲ್ಲಿ 373 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 26 ಮಂದಿ, ಕಲಬುರ್ಗಿಯಲ್ಲಿ 21 ಮಂದಿ, ಹಾಸನದಲ್ಲಿ 20 ಮಂದಿ, ತುಮಕೂರಿನಲ್ಲಿ 19 ಮಂದಿ, ಉತ್ತರ ಕನ್ನಡದಲ್ಲಿ 15 ಮಂದಿ, ಬಾಗಲಕೋಟೆಯಲ್ಲಿ 14 ಮಂದಿ, ಮಂಡ್ಯ ಹಾಗೂ ರಾಮನಗರದಲ್ಲಿ ತಲಾ 13 ಮಂದಿ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರಿನಲ್ಲಿ ತಲಾ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ.

ADVERTISEMENT

ತುಮಕೂರು (2,668), ಬಳ್ಳಾರಿ (2,421), ಮೈಸೂರು (2,340), ಬೆಳಗಾವಿ (1,592), ಮಂಡ್ಯ (1,385), ಹಾಸನ (1,339), ಉಡುಪಿ (1,219), ದಕ್ಷಿಣ ಕನ್ನಡ (1,215) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಸೋಂಕಿತರಲ್ಲಿ 35,879 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖ ಹೊಂದಿದವರ ಸಂಖ್ಯೆ 15.10 ಲಕ್ಷ ದಾಟಿದೆ.

ಟಿವಿಎಸ್‌ನಿಂದ 135 ಆಮ್ಲಜನಕ ಕಾನ್ಸೆಂಟ್ರೇಟರ್‌ ಕೊಡುಗೆ
ಮೈಸೂರು:
ಟಿವಿಎಸ್ ಮೋಟಾರ್ ಕಂಪನಿಯ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ವತಿಯಿಂದ, ಮೈಸೂರು ಜಿಲ್ಲಾಡಳಿತಕ್ಕೆ 135 ಆಮ್ಲಜನಕ ಕಾನ್ಸೆಂಟ್ರೇಟರ್‌ ಯಂತ್ರಗಳನ್ನು ಕೊಡುಗೆ ನೀಡಿದೆ.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಅಡಿಯಲ್ಲಿ ಇವುಗಳನ್ನು ನೀಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.