ADVERTISEMENT

Covid-19 Karnataka Updates: ಒಂದೇ ದಿನ 3,176 ಮಂದಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 19:13 IST
Last Updated 15 ಜುಲೈ 2020, 19:13 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   
""
""

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಬುಧವಾರ ಒಂದೇ ದಿನ 3,176 ಮಂದಿಯಲ್ಲಿ ಕೋವಿಡ್–19 ದೃಢಪಟ್ಟಿದೆ. ಸೋಂಕಿಗೆ ಒಳಗಾದವರಲ್ಲಿ ಮತ್ತೆ 87 ಮಂದಿ ಮೃತಪಟ್ಟಿದ್ದಾರೆ.

ಹೊಸದಾಗಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕು ಯಾರಿಂದ ಹೇಗೆ ಬಂತು ಎನ್ನುವುದೇ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಸಮುದಾಯದ ಹಂತಕ್ಕೆ ಸೋಂಕು ವ್ಯಾಪಿಸಿರುವ ಬಗ್ಗೆ ವೈದ್ಯಕೀಯ ಕ್ಷೇತ್ರದ ತಜ್ಞರು ಕೂಡ ಶಂಕೆ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಕೇವಲ 15 ದಿನಗಳಲ್ಲಿ 32,011 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 682 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 47,253 ಹಾಗೂ ಸಾವಿಗೀಡಾದವರ ಸಂಖ್ಯೆ 928ಕ್ಕೆ ತಲುಪಿದೆ. ಈ ಪರಿಣಾಮ ಅಧಿಕ ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನ ತಲುಪಿದೆ.

ADVERTISEMENT

ಬುಧವಾರ ಒಂದೇ ದಿನ 22,204 ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ನಡೆಸಿದ ಪರೀಕ್ಷೆಗಳ ಸಂಖ್ಯೆ 9 ಲಕ್ಷದ ಗಡಿ ದಾಟಿದೆ. ಬುಧವಾರ ಬೆಂಗಳೂರಿನಲ್ಲಿ 463 ಮಂದಿ ಸೇರಿದಂತೆ 1,076 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ:ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, ಹೊಸದಾಗಿ 1,975 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಕೇವಲ 48 ಗಂಟೆಗಳಲ್ಲಿ 3,242 ಮಂದಿಗೆ ಸೋಂಕು ಹರಡಿದೆ. ಧಾರವಾಡ (139), ಬಳ್ಳಾರಿ (136), ಮೈಸೂರು (99), ವಿಜಯಪುರ (80) ಜಿಲ್ಲೆಯಲ್ಲಿಯೂ ಹೊಸದಾಗಿ ಅಧಿಕ ಪ್ರಕರಣಗಳು ವರದಿಯಾಗಿವೆ.

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ2.25 ಲಕ್ಷ ಮಂದಿ
ಕೊರೊನಾ ಕಾರಣಕ್ಕೆ 14 ದಿನಗಳ ಮನೆ ಕ್ವಾರಂಟೈನ್‌ನಲ್ಲಿ ಇರಬೇಕಾಗಿದ್ದ 2.25 ಲಕ್ಷ ಮಂದಿ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದಿದ್ದಾರೆ. ಅವರಲ್ಲಿ 1,645 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು. ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು. ಒಂದು ವೇಳೆ ಈ ಅವಧಿಯಲ್ಲಿ ಮನೆಯಿಂದ ಹೊರಬಂದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಇಷ್ಟಾಗಿಯೂ ಕೆಲವರು ನಿಯಮವನ್ನು ಗಾಳಿಗೆ ತೂರಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಸದ್ಯ ರಾಜ್ಯದಲ್ಲಿ 1.54 ಲಕ್ಷ ಮಂದಿ ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಪದೇಪದೇ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಲಸಿಕೆ ಪರಿಣಾಮಕಾರಿ
ವಾಷಿಂಗ್ಟನ್‌:ಕೋವಿಡ್‌–19ರ ಚಿಕಿತ್ಸೆಗಾಗಿಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಅಮೆರಿಕದಲ್ಲಿ ಮಾನವರ ಮೇಲೆ ಪ್ರಯೋಗ ಮಾಡಲಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ. ಜುಲೈ 27ಕ್ಕೆ ಇದರ ಅಂತಿಮ ಹಂತದ ಪರೀಕ್ಷೆ ಆರಂಭವಾಗಲಿದೆ.

(ಮಾಸ್ಕೊ ವರದಿ):ರಷ್ಯಾದಲ್ಲೂ ಕೋವಿಡ್‌ ಚಿಕಿತ್ಸೆಗಾಗಿ ಅಭಿವೃದ್ಧಿ ಪಡಿಸಲಾಗಿರುವ ಲಸಿಕೆ ಕ್ಲಿನಿಕಲ್‌ ಟ್ರಯಲ್ಸ್‌ನಲ್ಲಿ ಯಶಸ್ವಿಯಾಗಿದ್ದು, ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆಗಸ್ಟ್‌ನಲ್ಲಿ ಮತ್ತಷ್ಟು ಜನರ ಮೇಲೆ ಇದರ ಪ್ರಯೋಗ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.