
ಎಚ್.ಕೆ.ಪಾಟೀಲ
ಬೆಂಗಳೂರು: ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ಫಸಲು ಕಳೆದುಕೊಂಡ ರೈತರಿಗೆ ಮಾತ್ರವಲ್ಲದೇ, ಒಂದು ಗ್ರಾಮ ವ್ಯಾಪ್ತಿಯನ್ನು ಘಟಕವಾಗಿ ಪರಿಗಣಿಸಿ ಬೆಳೆ ವಿಮೆ ಮಾಡಿಸಿದ್ದ ಎಲ್ಲ ರೈತರಿಗೂ ಪರಿಹಾರ ನೀಡುವ ಹೊಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಮಾಹಿತಿ ನೀಡಿದರು.
2026–27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ‘ಕಂಪ್ಲೀಟ್ ರಿಸ್ಕ್ ಟ್ರಾನ್ಸ್ಫರ್ ಮೆಕಾನಿಸಂ’ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಪ್ರಕೃತಿ ವಿಕೋಪ ಎಂದರೆ ಆಲಿಕಲ್ಲು, ಮಳೆ, ಭೂಕುಸಿತ ಮತ್ತು ಮಳೆ–ಪ್ರವಾಹದ ನೀರು ನಿಂತು ಬೆಳೆಹಾನಿ, ಮೇಘಸ್ಫೋಟ, ಗುಡುಗು–ಮಿಂಚು ಮತ್ತು ಬೆಂಕಿ ಅವಘಡದಿಂದ ಬೆಳೆ ನಷ್ಟ ಆದಾಗ ಕ್ಷೇತ್ರಾಧಾರಿತವಾಗಿ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸಲಾಗುತ್ತದೆ ಎಂದು ಪಾಟೀಲ ಹೇಳಿದರು.
ಅಲ್ಲದೇ, ಮಾರ್ಗಸೂಚಿ ಅನ್ವಯ ಹೋಬಳಿ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನೀಡುವ ಫಸಲು ಕಟಾವು ಪ್ರಯೋಗಗಳಿಂದ ಬಂದ ವಾಸ್ತವಿಕ ಇಳುವರಿಯು ನಿಗದಿಪಡಿಸಲಾದ ಆರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಕೊರತೆಗೆ ಅನುಗುಣವಾಗಿ ಹೋಬಳಿ/ ಗ್ರಾಮ ಪಂಚಾಯಿತಿ ವಿಮಾ ಘಟಕದಲ್ಲಿ ಬೆಳೆ ವಿಮೆ ಮಾಡಿದ ಎಲ್ಲ ರೈತರಿಗೆ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.