ADVERTISEMENT

ಅಂತರರಾಜ್ಯ ಬಸ್‌ ಸಂಚಾರಕ್ಕೆ ಚಿಂತನೆ: ಸಚಿವ ಲಕ್ಷ್ಮ ಸವದಿ

ಪ್ರಯಾಣಕ್ಕೆ ಒಪ್ಪಿಗೆ ಕೋರಿ ಎಲ್ಲ ರಾಜ್ಯಗಳಿಗೆ ಪತ್ರ, ಮಹಾರಾಷ್ಟ್ರಕ್ಕೆ ಮಾತ್ರ ನಿಷಿದ್ಧ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 8:07 IST
Last Updated 8 ಜೂನ್ 2020, 8:07 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಕಲಬುರ್ಗಿ: ‘ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಿಗೂ ಬಸ್‌ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದ್ದು, ಅಲ್ಲಿಂದ ಒಪ್ಪಿಗೆ ಬಂದರೆ ಸಂಚಾರ ಆರಂಭಿಸಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

‘ರಾಜ್ಯದೊಳಗೆ ಹವಾನಿಯಂತ್ರಿತ ಸ್ಲೀಪರ್‌ ಕೋಚ್‌ ಬಸ್‌ಗಳ ಟಿಕೆಟ್‌ ಬುಕಿಂಗ್‌ ಆರಂಭಿಸಲಾಗಿದೆ. ಹೊರ ರಾಜ್ಯ ಪ್ರವಾಸ ಮಾಡುವವರಿಂದ ಕೂಡ ಬೇಡಿಕೆ ಬರುತ್ತಿದೆ’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.‌

‘ಲಾಕ್‌ಡೌನ್‌ ಕಾರಣ ರಾಜ್ಯದ ಸಾರಿಗೆ ಇಲಾಖೆಗೆ ₹ 2,200 ಕೋಟಿ ನಷ್ಟ ಸಂಭವಿಸಿದೆ. ಇದನ್ನು ಸರಿದೂಗಿಸಲು ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ. ಸಿಬ್ಬಂದಿ ಕಡಿತ, ರಜೆ ಮೇಲೆ ಕಳುಹಿಸುವ ಕ್ರಮ ಅನುಸರಿಸುವುದಿಲ್ಲ. ಬದಲಾಗಿ ಸೋರಿಕೆ ತಡೆ, ಕಾರ್ಯಕ್ಷಮತೆ ವೃದ್ಧಿ ಸೇರಿದಂತೆ ಇತರ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತೇವೆ. ಸದ್ಯಕ್ಕೆ 14 ಲಕ್ಷ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಕನಿಷ್ಠ 1 ಕೋಟಿ ಮಂದಿ ಪ್ರಯಾಣಿಸುವುದು ಎಂದಿನ ರೂಢಿ’ ಎಂದು ಅವರು ವಿವರಿಸಿದರು.

‘ಮುಂದಿನ ಮೂರು ತಿಂಗಳಲ್ಲಿ 4,000 ಹೊಸ್‌ ಬಸ್‌ಗಳನ್ನು ಖರೀದಿಸಿ, ಸಾರಿಗೆ ನಿಗಮಗಳಿಗೆ ನೀಡಲಾಗುವುದು. ಸಿಬ್ಬಂದಿಗೆ ಎರಡು ತಿಂಗಳ ಸಂಬಳ ನೀಡಲಾಗಿದ್ದು, ಮೇ ತಿಂಗಳ ಸಂಬಳವನ್ನೂ ಸರ್ಕಾರವೇ ಭರಿಸುತ್ತದೆ’ ಎಂದರು.

ರೊಟ್ಟಿ ಊಟ ಮಾಡಿಸಿದ ಶಾಸಕ ಕತ್ತಿ: ‘ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿನಲ್ಲಿ ಒಬ್ಬರನ್ನೊಬ್ಬರು ಊಟಕ್ಕೆ ಕರೆಯುವುದು ಸಾಮಾನ್ಯ. ಒಳ್ಳೆಯ ರೊಟ್ಟಿ ಊಟ ಮಾಡಿಸಲು ಶಾಸಕ ಉಮೇಶ ಕತ್ತಿ ಅವರು ಈಚೆಗೆ ಕೆಲವರನ್ನು ಕರೆದಿದ್ದರು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಉಪಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಸಮಜಾಯಿಷಿ ನೀಡಿದರು.

‘ಸರ್ಕಾರಕ್ಕೆ ಬರುವ ಆದಾಯ ಕಡಿಮೆ ಆಗಿದೆ. ಎಲ್ಲ ಶಾಸಕರ ಕ್ಷೇತ್ರಗಳಿಗೂ ನಿರೀಕ್ಷಿತ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕೆಲವರಲ್ಲಿ ಸಮಾಧಾನವಿದೆ. ಅದೆಲ್ಲವನ್ನೂ ಮುಖ್ಯಮಂತ್ರಿ ಯಡಿಯೂರಪ‍್ಪ ಅವರು ಬಗೆಹರಿಸಲಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಸರ್ಕಾರ ತನ್ನ ಪೂರ್ಣ ಅವಧಿ ಮುಗಿಸಲಿದೆ’ ಎಂದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಡಾ.ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.