ADVERTISEMENT

ಡಬಲ್‌ ಎಂಜಿನ್‌ ಸರ್ಕಾರ: ಭ್ರಷ್ಟಾಚಾರ ಡಬಲ್‌: ಅರವಿಂದ ಕೇಜ್ರಿವಾಲ್

40 ಪರ್ಸೆಂಟ್‌ ಸರ್ಕಾರ ಕಿತ್ತೊಗೆದು ಎಎಪಿ ಸರ್ಕಾರ ತನ್ನಿ– ಅರವಿಂದ್‌ ಕೇಜ್ರಿವಾಲ್ ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 0:15 IST
Last Updated 5 ಮಾರ್ಚ್ 2023, 0:15 IST
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ರಾಜ್ಯಮಟ್ಟದ ಸಮಾವೇಶವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉದ್ಘಾಟಿಸಿದರು. ಎಎಪಿ ಮುಖಂಡರಾದ ಪೃಥ್ವಿ ರೆಡ್ಡಿ ‘ಮುಖ್ಯಮಂತ್ರಿ’ ಚಂದ್ರು ಮುಂತಾದವರಿದ್ದರು  –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ರಾಜ್ಯಮಟ್ಟದ ಸಮಾವೇಶವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉದ್ಘಾಟಿಸಿದರು. ಎಎಪಿ ಮುಖಂಡರಾದ ಪೃಥ್ವಿ ರೆಡ್ಡಿ ‘ಮುಖ್ಯಮಂತ್ರಿ’ ಚಂದ್ರು ಮುಂತಾದವರಿದ್ದರು  –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ   

ದಾವಣಗೆರೆ: ‘ಕರ್ನಾಟಕದಲ್ಲಿರುವ 20 ಪರ್ಸೆಂಟ್‌ ಸರ್ಕಾರವನ್ನು ಕಿತ್ತೊಗೆದು ನಮಗೆ ಅಧಿಕಾರ ಕೊಡಿ. ಭ್ರಷ್ಟಾಚಾರ ಇಲ್ಲದಂತೆ ಮಾಡುತ್ತೇವೆ. ಡಬಲ್‌ ಎಂಜಿನ್‌ ಸರ್ಕಾರ ತರುತ್ತೇವೆ ಎಂದು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಅದನ್ನು ನಂಬಿದ ಜನ ಅಧಿಕಾರವನ್ನೂ ನೀಡಿದರು. ಆದರೆ, ಡಬಲ್ ಎಂಜಿನ್‌ ಸರ್ಕಾರದಿಂದಾಗಿ ಭ್ರಷ್ಟಾಚಾರ ದ್ವಿಗುಣಗೊಂಡು, 20 ಪರ್ಸೆಂಟ್‌ನಿಂದ 40 ಪರ್ಸೆಂಟ್‌ಗೆ ಹೆಚ್ಚಿತು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದರು.

ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ವಿಧಾನಸಭೆ ಚುನಾವಣೆ ಅಂಗವಾಗಿ ನಡೆದ ಎಎಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದೆಹಲಿಯಲ್ಲಿ 12 ಲಕ್ಷ, ಪಂಜಾಬ್‌ನಲ್ಲಿ 77,000 ಜನರಿಗೆ ಉದ್ಯೋಗ ನೀಡಿದ್ದೇವೆ. ಕರ್ನಾಟಕದಲ್ಲಿ ಅಧಿಕಾರ ನೀಡಿದರೆ ದೆಹಲಿಯಲ್ಲಿ ಜಾರಿಗೊಳಿಸಿರುವ ಎಲ್ಲ ಯೋಜನೆಗಳನ್ನೂ ಜಾರಿಗೆ ತಂದು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ. ಅದಕ್ಕಾಗಿ 40 ಪರ್ಸೆಂಟ್‌ ಸರ್ಕಾರವನ್ನು ಕಿತ್ತೊಗೆದು 0 ಪರ್ಸೆಂಟ್‌ ಭ್ರಷ್ಟಾಚಾರದ ಆಡಳಿತ ನೀಡುವ ಆಮ್‌ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಅವರು ಸಲಹೆ ನೀಡಿದರು.

ADVERTISEMENT

ಲೋಕಾಯುಕ್ತ ದಾಳಿ ಮಾಡಿದಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮನೆಯಲ್ಲಿ ₹ 8 ಕೋಟಿಗೂ ಅಧಿಕ ಹಣದ ಕಂತೆ ಸಿಕ್ಕಿದೆ. ಆದರೂ ಅವರನ್ನು ಬಂಧಿಸಿಲ್ಲ. ಉತ್ತಮ ಶಿಕ್ಷಣ ವ್ಯವಸ್ಥೆ ನೀಡಲು ಶ್ರನಿಸಿದ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಅವರ ಮನೆ ಮೇಲೆ ದಾಳಿ ನಡೆಸಿದಾಗ ಕೇವಲ ₹ 10,000 ಸಿಕ್ಕಿದೆ. ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಬದಲು ಪ್ರಾಮಾಣಿಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

‘ಜನರ ಆಕ್ರೋಶವು ಬಿರುಗಾಳಿಯಾದರೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅನ್ನು ಉರುಳಿಸಿ ಆಮ್‌ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಸಾಧ್ಯ’ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅಭಿಪ್ರಾಯಪಟ್ಟರು.

ಕೇಂದ್ರ ಮತ್ತು ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರಗಳು ಜನರ ಲೂಟಿ ಹೊಡೆಯುತ್ತಿವೆ. ಹಣ ಎಲ್ಲಿಂದ ಬರುತ್ತದೆ’ ಎಂದು ಟೀಕಿಸಿದರು.

ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ‘ಮುಖ್ಯಮಂತ್ರಿ’ ಚಂದ್ರು, ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.