ಮೈಸೂರು: ‘ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ, ಇಚ್ಛಾಶಕ್ತಿ ಕೊರತೆ ಕಂಡುಬರುತ್ತಿದೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದೂರಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ರೈಲ್ವೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು, ಪ್ರಯಾಣಿಕರಿಗೆ ಸೌಲಭ್ಯಗಳು ದೊರೆಯಬೇಕು ಎಂಬುದು ಕೇಂದ್ರದ ಉದ್ದೇಶ. ಇದಕ್ಕೆ ತಕ್ಕಂತೆ ರಾಜ್ಯ ಸ್ಪಂದಿಸುತ್ತಿಲ್ಲ. ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಚಾಮರಾಜನಗರದಿಂದ ತಮಿಳುನಾಡಿನ ಮೆಟ್ಟುಪಾಳ್ಯಂವರೆಗೆ ರೈಲು ಮಾರ್ಗ ವಿಸ್ತರಿಸುವುದು, ಮೈಸೂರು–ಕುಶಾಲನಗರ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅಗತ್ಯವಾದ ಭೂಮಿ ಕೊಡುತ್ತಿಲ್ಲ. ಈ ಬಗ್ಗೆ ನವದೆಹಲಿಗೆ ಬಂದಿದ್ದಾಗ ಮುಖ್ಯಮಂತ್ರಿಗೆ, ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಕಾರ್ಯದರ್ಶಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ತಿಳಿಸಿದ್ದೆ. ಮನವಿಪತ್ರ ಸಲ್ಲಿಸುವಂತೆ ತಿಳಿಸಿದ್ದರೂ ಸಲ್ಲಿಸಿಲ್ಲ’ ಎಂದು ತಿಳಿಸಿದರು.
‘ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಮಾಡುವುದಕ್ಕಾಗಿ ಮೇಲ್ಸೇತುವೆ ಹಾಗೂ ಕೆಳಸೇತುವೆಗಳಿಗೆ ಶೇ 100ರಷ್ಟು ಹಣವನ್ನು ಕೇಂದ್ರದಿಂದಲೇ ಕೊಡುತ್ತಿದ್ದೇವೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿರುವುದನ್ನು ಮನಗಂಡು ಪ್ರಧಾನಿಯವರೇ ಕೊಡುತ್ತಿದ್ದಾರೆ. ಬೆಂಗಳೂರು ನಗರದ 100 ಕಿ.ಮೀ. ವ್ಯಾಪ್ತಿಯಲ್ಲಿ 175 ಲೆವೆಲ್ ಕ್ರಾಸಿಂಗ್ಗಳಿವೆ. ಇವುಗಳು ಇಲ್ಲದಂತೆ ಮೂರು ವರ್ಷಗಳಲ್ಲಿ ಮಾಡಲಾಗುವುದು. ಒಟ್ಟು ₹ 48ಸಾವಿರ ಮೊತ್ತದ ಹಳೆಯ ಯೋಜನೆಯನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದೇವೆ. ರಾಜ್ಯ ಸರ್ಕಾರವು ಜನರ ದಿಕ್ಕು ತಪ್ಪಿಸುವ ಕೆಲಸಗಳನ್ನು ಮಾಡುವ ಬದಲಿಗೆ, ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಈ ವಿಷಯದಲ್ಲಿ ರಾಜ್ಯದೊಂದಿಗೆ ಚರ್ಚೆಗೆ ಸಿದ್ಧವಿದ್ದೇನೆ’ ಎಂದು ಹೇಳಿದರು.
‘ಜಿಎಸ್ಟಿ ವ್ಯವಸ್ಥೆಯಡಿ ಈಗಿರುವ ನಾಲ್ಕು ತೆರಿಗೆ ಹಂತಗಳನ್ನು 2 ಹಂತಗಳಿಗೆ ತಗ್ಗಿಸುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ವಿಷಯದಲ್ಲಿ ಯಾವುದೇ ರಾಜ್ಯ ಸರ್ಕಾರವನ್ನೂ ಗುರಿಪಡಿಸುವುದಿಲ್ಲ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುತ್ತದೆ. ರಾಜ್ಯದ ಪಾಲು ರಾಜ್ಯಕ್ಕೆ ಹಾಗೂ ಕೇಂದ್ರದ್ದು ಕೇಂದ್ರಕ್ಕೆ ಸಿಗುತ್ತದೆ. ದೇಶದಲ್ಲಿ ಚುನಾವಣೆ ಬರುತ್ತಲೇ ಇರುತ್ತವೆ. ಬಿಹಾರ ಚುನಾವಣೆಗೂ ಜಿಎಸ್ಟಿ ಹಂತ ಪರಿಷ್ಕರಣೆಗೂ ಸಂಬಂಧವಿಲ್ಲ. ಆ ರೀತಿಯ ಉದ್ದೇಶವೂ ಇಲ್ಲ. ಹೀಗಾಗಿಯೇ, ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ತರುವುದು ಪ್ರಧಾನಿ ನರೇಂದ್ರ ಮೋದಿ ಉದ್ದೇಶವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.