ಬೆಂಗಳೂರು: ‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಸಮಗ್ರ ಸಮೀಕ್ಷೆಯ ಪ್ರಗತಿ ಬೆಂಗಳೂರು ವ್ಯಾಪ್ತಿಯಲ್ಲಿ ನಿಧಾನಗತಿಯಲ್ಲಿದೆ. ಹೀಗಾಗಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸಿ.ವಿ.ರಾಮನ್ ನಗರ ವ್ಯಾಪ್ತಿಯ ಎಂ.ಸಿ.ಕಾಲೊನಿಯ ದೊಡ್ಡಗುಂಟ ಬಡಾವಣೆಯಲ್ಲಿ ಬುಧವಾರ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರ ಜತೆಗೆ ಆಂಜನೇಯ ಅವರೂ ಮನೆ–ಮನೆಗೆ ಭೇಟಿ ನೀಡಿದರು.
ಮಾದಿಗ ಸಮುದಾಯದವರ ಮನೆಗೆ ಭೇಟಿ ನೀಡಿದ ಅವರು, ‘ಸಮೀಕ್ಷೆ ವೇಳೆ ಎಲ್ಲರೂ ನಿಮ್ಮ ಜಾತಿಯಲ್ಲಿ ಮಾದಿಗ ಎಂದೇ ಬರೆಸಿ. ಸಮೀಕ್ಷೆಯಲ್ಲಿ ನಿಮ್ಮ ಜಾತಿಯ ಕ್ರಮ ಸಂಖ್ಯೆ 061. ಇದನ್ನು ಸರಿಯಾಗಿ ನೆನಪಿನಲ್ಲಿ ಇರಿಸಿಕೊಳ್ಳಿ’ ಎಂದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ತ್ವರಿತವಾಗಿ ಆಗುತ್ತಿದೆ. ಬೆಂಗಳೂರಿನಲ್ಲಿ ನಿಧಾನವಾಗುತ್ತಿದೆ. ಜತೆಗೆ ಸಮೀಕ್ಷೆ ನಡೆಸುತ್ತಿರುವವರಿಗೂ ಪೂರ್ಣ ಮಾಹಿತಿ ಇಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಿ, ಅವಧಿಯನ್ನೂ ವಿಸ್ತರಿಸಿ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.