ADVERTISEMENT

ಪಾಟಿ ಸವಾಲಿನ ತರಾತುರಿ ಸಲ್ಲ–ಹೈಕೋರ್ಟ್‌

ಸಿಆರ್‌ಪಿಸಿ ಕಲಂ 231(2)ರ ವ್ಯಾಖ್ಯಾನಕ್ಕೆ ವಿಶೇಷ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 22:30 IST
Last Updated 21 ಫೆಬ್ರುವರಿ 2026, 22:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಗುರುತರ ಕ್ರಿಮಿನಲ್ ಪ್ರಕರಣಗಳಲ್ಲಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 231ರ ಉಪ ಕಲಂ 2ರ ವ್ಯಾಖ್ಯಾನವನ್ನು ಹಿಗ್ಗಿಸಿ ಹೇಳಲು ಬೇಕಾದಷ್ಟು ಅವಕಾಶ ನೀಡುವ ವಿಶೇಷ ತೀರ್ಪೊಂದನ್ನು ಹೈಕೋರ್ಟ್‌ ನೀಡಿದೆ.

ಎಂಟು ಜನ ಪ್ರತ್ಯಕ್ಷ ಸಾಕ್ಷಿಗಳಿರುವ ಕೊಲೆ ಯತ್ನದ ಪ್ರಕರಣದಲ್ಲಿ, ‘ಪ್ರಾಸಿಕ್ಯೂಟರ್, ಅಷ್ಟೂ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ದಾಖಲು ಮಾಡಿಸಿದ ನಂತರವೇ ಎಲ್ಲರ ಪಾಟಿ ಸವಾಲಿಗೆ ಅವಕಾಶ ಮಾಡಿಕೊಡಬೇಕು’ ಎಂಬ ಆರೋಪಿಗಳ ಕೋರಿಕೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಇಂತಹ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಬಿಹಾರದ ಸಮಷ್ಟಿಪುರ ಜಿಲ್ಲೆಯ ಮಂಗಳಾಪುರದ ರವೀಂದ್ರ ಕುಮಾರ್ ಮತ್ತು ಮನೋಜ್‌ ಕುಮಾರ್ ಸಹಾನಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಮನ್ನಿಸಿರುವ ನ್ಯಾಯಪೀಠ, ‘ದೋಷಾರೋಪ ಪಟ್ಟಿಯಲ್ಲಿರುವ ಎಂಟೂ ಸಾಕ್ಷಿಗಳ ಮುಖ್ಯ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ದಾಖಲಾಗುವತನಕ ಪಾಟಿ ಸವಾಲನ್ನು ನಿರ್ಬಂಧಿಸಬೇಕು ಮತ್ತು ಪಾಟಿ ಸವಾಲಿಗೆ ಒತ್ತಾಯ ಮಾಡಬಾರದು’ ಎಂದು ಸೆಷನ್ಸ್‌ ಕೋರ್ಟ್‌ಗೆ ನಿರ್ದೇಶಿಸಿದೆ.

ADVERTISEMENT

‘ಹಾಲಿ ಪ್ರಕರಣದಲ್ಲಿ, ಒಂದೇ ಘಟನೆಗೆ ಹಲವಾರು ಸಾಕ್ಷಿಗಳನ್ನು ಪ್ರತ್ಯಕ್ಷದರ್ಶಿಗಳು ಎಂದು ಉಲ್ಲೇಖಿಸಲಾಗಿದೆ ಮತ್ತು ಇವರೆಲ್ಲಾ ನಿಕಟ ಸಂಬಂಧಿಗಳಾಗಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ, ಇವರಲ್ಲಿ ಆರಂಭಿಕ ಸಾಕ್ಷಿಯ ಮುಖ್ಯ ವಿಚಾರಣೆ ಮುಗಿದ ಕೂಡಲೇ ಆತನ ಪಾಟಿ ಸವಾಲಿಗೆ ಅವಕಾಶ ಮಾಡಿಕೊಟ್ಟಲ್ಲಿ ಅದರಿಂದ ಹೊರಹೊಮ್ಮುವ ಪ್ರಾಸಿಕ್ಯೂಷನ್‌ ದೌರ್ಬಲ್ಯ ನ್ಯಾಯದ ಸತ್ವವನ್ನು ಉಡುಗಿಸುತ್ತದೆ ಎಂಬ ಅರ್ಜಿದಾರರ ಆತಂಕ ಯಥೋಚಿತವಾಗಿದೆ. ಮಾತ್ರವಲ್ಲ, ನ್ಯಾಯಯುತವಾಗಿಯೂ ಗುರುತಿಸಲಾದ ಅಂಶಗಳನ್ನು ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ತನಿಖೆಯ ಸಮಯದಲ್ಲಿ ದೋಷಾರೋಪ ಪಟ್ಟಿಯಲ್ಲಿರುವ 1 ರಿಂದ 8ರವರೆಗಿನ ಎಲ್ಲಾ ಸಾಕ್ಷಿಗಳು ಕಲಂ 161ರ ಅಡಿಯಲ್ಲಿ ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಅಂಶದ ಹಿನ್ನೆಲೆಯಲ್ಲಿ, ಸೆಷನ್ಸ್‌ ನ್ಯಾಯಾಲಯ ಕಾನೂನಿಗೆ ಅನುಸಾರವಾಗಿ ತನ್ನ ವಿವೇಚನಾ ಅಧಿಕಾರ ಚಲಾಯಿಸುವಲ್ಲಿ ವಿಫಲವಾಗಿದೆ’ ಎಂದೂ ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎ.ವಿಕ್ರಂ ರಾಜ್‌ ವಾದ ಮಂಡಿಸಿದ್ದರು.

ನ್ಯಾ.ಎಂ.ನಾಗಪ್ರಸನ್ನ

* ಕ್ರಿಮಿನಲ್‌ ಅರ್ಜಿ ಸಂಖ್ಯೆ 16658/2025

* ಕೊಲೆ ಯತ್ನ ಆರೋಪದ ಪ್ರಕರಣ

* ಬಿಹಾರ ರಾಜ್ಯದ ಆರೋಪಿಗಳು

ಸೆಷನ್ಸ್ ಕೋರ್ಟ್‌ ಸಿಆರ್‌ಪಿಸಿ ಕಲಂ 231(2)ರ ಅಡಿಯಲ್ಲಿ ಅರ್ಜಿ ತಿರಸ್ಕರಿಸಿರುವುದು ನ್ಯಾಯಸಮ್ಮತವಾದ ವಿಚಾರಣಾ ಚೌಕಟ್ಟನ್ನು ದುರ್ಬಲಗೊಳಿಸುವಂತಿದೆ.
ನ್ಯಾ. ಎಂ.ನಾಗಪ್ರಸನ್ನ

ಒರೆಗೆ ಹಚ್ಚಿದ ಆರೋಪಿಗಳ ಅಹವಾಲು

‘ಪ್ರಕರಣದಲ್ಲಿನ ದೋಷಾರೋಪ ಪಟ್ಟಿಯಲ್ಲಿರುವ 1ರಿಂದ 8ರವರೆಗಿನ ಸಾಕ್ಷಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಒಬ್ಬೊಬ್ಬರ ಮುಖ್ಯ ವಿಚಾರಣೆ ಮುಗಿಯುತ್ತಿದ್ದಂತೆಯೇ ತಡಮಾಡದೆ ಪಾಟಿ ಸವಾಲು ನಡೆಸಲು ನಿರ್ದೇಶಿಸಿದರೆ ಪ್ರತಿವಾದ ಏನೆಂಬುದನ್ನು ಅಕಾಲಿಕವಾಗಿ ಬಹಿರಂಗಪಡಿಸಂತಾಗುತ್ತದೆ. ಆದ್ದರಿಂದ ಪಾಟಿ ಸವಾಲನ್ನು ಮುಂದೂಡಬೇಕು’ ಎಂದು ಕೋರಿ ಅರ್ಜಿದಾರ ಆರೋಪಿಗಳು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 231 (2)ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಲಾಗಿತ್ತು. ಅರ್ಜಿದಾರರ ವಿರುದ್ಧ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 34ರ ಜತೆಗೆ 302 307 323 324 326 ಮತ್ತು 504ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.