ಬೆಂಗಳೂರು: ‘ಸಾರಿಗೆ ನೌಕರರು ಕೂಡಲೇ ತಮ್ಮ ಮುಷ್ಕರ ನಿಲ್ಲಿಸಬೇಕು. ಮುಷ್ಕರ ನಿಲ್ಲಿಸಲಾಗಿದೆ ಎಂಬುದರ ಬಗ್ಗೆ ಬುಧವಾರ (ಆ.6) ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಮುಷ್ಕರ ಮುಂದುವರಿಸಿದ್ದೇ ಆದರೆ ಬಂಧಿಸಲು ಆದೇಶಿಸಲಾಗುವುದು’ ಎಂದು ಹೈಕೋರ್ಟ್, ಮುಷ್ಕರಕ್ಕೆ ಕರೆ ನೀಡಿರುವ ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಕಠಿಣ ಎಚ್ಚರಿಕೆ ನೀಡಿದೆ.
‘ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅನಿರ್ದಿಷ್ಟಾವಧಿ ಮಷ್ಕರಕ್ಕೆ ತಡೆ ನೀಡಬೇಕು’ ಎಂದು ಕೋರಿ ನಗರದ ಜೆ.ಸುನಿಲ್ ಸೇರಿದಂತೆ ಐವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
‘ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿ, ಸರ್ಕಾರದ ಜೊತೆಗಿನ ಮಾತುಕತೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂಬ ಹೈಕೋರ್ಟ್ ಆದೇಶವನ್ನು ಕಡೆಗಣಿಸಲಾಗಿದೆ’ ಎಂಬ ಅರ್ಜಿದಾರರ ಪರ ವಕೀಲರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮುಷ್ಕರ ತಡೆಹಿಡಿಯಲು ಆದೇಶಿಸಿದ್ದರೂ ಮುಷ್ಕರ ಆರಂಭಿಸಿರುವುದು ತರವಲ್ಲ. ಸರ್ಕಾರ, ಕರ್ನಾಟಕ ಅತಿ ಅವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ–2013 (ಎಸ್ಮಾ) ಅನ್ನು ಜುಲೈ 17ರಂದ ಜಾರಿ ಮಾಡಿದ್ದರೂ ಅದನ್ನು ಲೆಕ್ಕಿಸದೆ ಸೇವೆ ಸ್ಥಗಿತಗೊಳಿಸಿರುವುದು ಅಕ್ರಮ’ ಎಂದು ಕಿಡಿ ಕಾರಿತು.
‘ನಿಮ್ಮ ಸಮಸ್ಯೆ ಏನೇ ಇದ್ದರೂ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಬೇಡಿ. ಇದನ್ನೆಲ್ಲಾ ನಾವು ಸಹಿಸುವುದಿಲ್ಲ. ಅಕ್ರಮವಾಗಿ ಮುಷ್ಕರ ನಡೆಸುತ್ತಿರುವವರನ್ನು ಪೊಲೀಸರು ಬಂಧಿಸಬಹುದು. ನಿಮ್ಮ ಅವಿಧೇಯತೆಗೆ ನ್ಯಾಯಾಲಯವೂ ನ್ಯಾಯಾಂಗ ನಿಂದನೆ ಅಪರಾಧದಡಿ ಅಗತ್ಯ ಕಾನೂನು ಜರುಗಿಸಬಹುದಾಗಿದೆ’ ಎಂದು ಚಾಟಿ ಬೀಸಿತು.
ಇದಕ್ಕೆ ಉತ್ತರಿಸಿದ ‘ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ’ಯ ಪರ ಹಾಜರಿದ್ದ ಹೈಕೋರ್ಟ್ನ ಹಿರಿಯ ವಕೀಲ ಕೆ.ಬಿ.ನಾರಾಯಣ ಸ್ವಾಮಿ, ‘ರಾತ್ರಿ ದೊರೆತ ಹೈಕೋರ್ಟ್ ಆದೇಶವನ್ನು ಎಲ್ಲ ವಿಭಾಗಗಳ ಸಂಘಟನಾ ಪದಾಧಿಕಾರಿಗಳಿಗೆ ತಲುಪಿಸಲು ತಡವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಂಗಳವಾರ ಯಾವುದೇ ಮುಷ್ಕರ ನಡೆದಿಲ್ಲ. ಶೇ 98ರಷ್ಟು ಬಿಎಂಟಿಸಿ ಬಸ್ಗಳ ಸೇವೆಯನ್ನು ಒದಗಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ಅರುಹಿದರು.
ಇದನ್ನು ಒಪ್ಪದ ನ್ಯಾಯಪೀಠ, ಪ್ರತಿವಾದಿಗಳಾದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಮುಷ್ಕರವನ್ನು ತಡೆಹಿಡಿದು ಸೋಮವಾರ (ಆ.4) ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿತು.
‘ನೌಕರರು ಮುಷ್ಕರ ಮುಂದುವರಿಸಿದರೆ ಅವರ ವಿರುದ್ಧ ಎಸ್ಮಾ ಕಾಯ್ದೆಯ ಕಲಂ 9ರ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರಿಗೆ ಆದೇಶಿಸಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ದೀಕ್ಷಾ ಎನ್.ಅಮೃತೇಶ್, ಕೆಎಸ್ಆರ್ಟಿಸಿ ಪರ ಹಿರಿಯ ವಕೀಲೆ ಎಚ್.ಆರ್.ರೇಣುಕಾ ಹಾಜರಿದ್ದರು.
ವಿಚಾರಣೆ ಇದೇ 7ಕ್ಕೆ ಮುಂದೂಡಿಕೆ | ಎಸ್ಮಾ ಕಾಯ್ದೆ ಕಲಂ 9ರ ಅಡಿ ಕ್ರಮಕ್ಕೆ ಆದೇಶ
ಮುಷ್ಕರ ನಿಲ್ಲಿಸದಿದ್ದರೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಬಂಧನಕ್ಕೆ ಆದೇಶಿಸಲಾಗುವುದುವಿಭು ಬಖ್ರು ಮುಖ್ಯ ನ್ಯಾಯಮೂರ್ತಿ
-ಅರ್ಜಿದಾರರ ಕೋರಿಕೆಗಳು
*ಅನಿರ್ದಿಷ್ಟಾವಧಿ ಮುಷ್ಕರ ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು
* ಮುಷ್ಕರ ಹೂಡುವುದಾಗಿ ಘೋಷಿಸಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ದೇಶಿಸಬೇಕು
*ನಾಲ್ಕು ನಿಗಮಗಳು ತಮ್ಮ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟು ಮಾಡದಂತೆ ಸಂಚರಿಸಲು ನಿರ್ದೇಶಿಸಬೇಕು
* ಒಕ್ಕೂಟದ ಬೇಡಿಕೆಗಳ ಪರಿಶೀಲನೆಗಾಗಿ ಮತ್ತು ವಿವಾದ ಪರಿಹಾರದ ನಿಟ್ಟಿನಲ್ಲಿ ಮಧ್ಯಸ್ಥಿಕೆಗಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.