
ಬೆಂಗಳೂರು: ‘ರಾಜ್ಯದಲ್ಲಿನ ನಾಯಕತ್ವ ಗೊಂದಲ ಕುರಿತು ಬಜೆಟ್ ಪೂರ್ವಭಾವಿ ಸಭೆ ಆರಂಭಕ್ಕೂ ಮೊದಲೇ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ನ ಗೊಂದಲಗಳ ಕುರಿತು ಹೈಕಮಾಂಡ್ಗೆ ಮಾಹಿತಿ ಇದೆ. ವಿವಿಧ ಮೂಲಗಳಿಂದ ಮಾಹಿತಿ ಪಡೆದಿರುತ್ತಾರೆ. ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಫೆಬ್ರುವರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ಆರಂಭವಾಗುತ್ತವೆ. ಅಷ್ಟರ ಒಳಗೆ ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ’ ಎಂದರು.
‘ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು. ಹಿರಿಯರಾದ ಪರಮೇಶ್ವರ ಅವರಿಗೆ ಆ ಸ್ಥಾನ ಸಿಗಬೇಕು ಎಂದು ಹಲವರು ಹೇಳುತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ ‘ಅವರ ಅಭಿಮಾನ, ಪ್ರೀತಿಗೆ ಹಾಗೆ ಹೇಳುತ್ತಾರೆ. ಹೇಳಬೇಡಿ ಎನ್ನಲು ಆಗುತ್ತದೆಯೇ’ ಎಂದು ಮರು ಪ್ರಶ್ನಿಸಿದರು.
ಇಬ್ಬರೂ ತಮ್ಮಂದಿರು:
ಕಾಂಗ್ರೆಸ್ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ವಿಧಾನಸಭೆಗೆ 9 ಬಾರಿ ಆಯ್ಕೆಯಾಗಿರುವ ನಾನೇ ಹಿರಿಯ ಶಾಸಕ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ತಮ್ಮಂದಿರಿದ್ದಂತೆ. ಮುಖ್ಯಮಂತ್ರಿ ಬದಲಾವಣೆ, ಖಾತೆ ಹಂಚಿಕೆ ಕುರಿತು ಹೇಳುವುದೂ ಇಲ್ಲ, ಪ್ರತಿಕ್ರಿಯೆ ನೀಡುವುದೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.