ADVERTISEMENT

ರಾಜ್ಯದಲ್ಲಿ ಬಿಜೆಪಿಯಿಂದ ಸ್ಥಿರ ಸರ್ಕಾರ ಮರೀಚಿಕೆಯೇ ಸರಿ: ಕಾಂಗ್ರೆಸ್ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 9:24 IST
Last Updated 29 ಜುಲೈ 2021, 9:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿಯಿಂದ ಸ್ಥಿರ ಸರ್ಕಾರ ಮರೀಚಿಕೆಯೇ ಸರಿ’ ಎಂದು ಕಾಂಗ್ರೆಸ್ ಕುಟುಕಿದೆ.

ರಾಜ್ಯ ಸರ್ಕಾರವನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ನಾಯಕತ್ವ ಬದಲಾವಣೆಯಿಂದ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. ಜಗದೀಶ ಶೆಟ್ಟರ್ ಮುನಿಸಿಕೊಂಡಿದ್ದಾರೆ. ಇತ್ತ ಈಶ್ವರಪ್ಪ ಸೆಟೆದು ಕುಳಿತಿದ್ದಾರೆ. ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ. ಒಟ್ಟಿನಲ್ಲಿ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ’ ಎಂದು ಹೇಳಿದೆ.

ಇಷ್ಟು ದಿನ ಯಾವುದೇ ಬಿಜೆಪಿ ನಾಯಕರನ್ನ ಎಲ್ಲಿದ್ದೀರಿ ಎಂದು ಕೇಳಿದರೂ ದಿಲ್ಲಿ ದಿಲ್ಲಿ ದಿಲ್ಲಿ... ಎನ್ನುತ್ತಿದ್ದರು. ಈಗ ಖಾತೆ ಆಸೆಗಾಗಿ, ಸಿಎಂ ಮನೆ ಮುಂದೆ ನಿಂತು ಇಲ್ಲಿ ಇಲ್ಲಿ ಇಲ್ಲಿ... ಎನ್ನುತ್ತಿದ್ದಾರೆ. ನೆರೆಯಿಂದ ನೊಂದ ರಾಜ್ಯದ ಜನರು ಮಾತ್ರ ಸರ್ಕಾರವನ್ನು ಎಲ್ಲಿ ಎಲ್ಲಿ ಎಲ್ಲಿ... ಎಂದು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

‘ಕಳೆದ ಪ್ರವಾಹಗಳಿಗಿಂತ ಈ ಭಾರಿಯ ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಭೀಕರವಾಗಿದೆ. ಲಾಕ್‌ಡೌನ್‌ನಿಂದ ಆದಾಯದ ಮೂಲವನ್ನು ಕಳೆದುಕೊಂಡ ಜನತೆಗೆ ನೆರೆ ದೊಡ್ಡ ಆಘಾತ ತಂದಿದೆ. ಸಂತ್ರಸ್ತರ ಬಳಿ ಹಣವಿಲ್ಲ. ತಕ್ಷಣದ ಪರಿಹಾರವಾಗಿ ₹10 ಸಾವಿರ ನೆರವು ನೀಡುವುದು ಅತ್ಯಗತ್ಯ. ಸಂಪುಟ ಸರ್ಕಸ್ಸಿನಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಗಮನಿಸುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

ಮಾಜಿ ಮುಖ್ಯಮಂತ್ರಿ ಹಾಗೂ ಹಿಂದಿನ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಹಿರಿಯ ಶಾಸಕ ಜಗದೀಶ ಶೆಟ್ಟರ್‌ ಅವರು ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರದಿರಲು ನಿರ್ಧರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.