ಬೆಂಗಳೂರು: ‘ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ’ ಎಂದು ಬಿಜೆಪಿ ಟೀಕಿಸಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದಲ್ಲಿರುವ ಒಟ್ಟು ಏಮ್ಸ್ಗಳಲ್ಲಿ ಕಾಂಗ್ರೆಸ್ ಘೋಷಿಸಿದ್ದು ಬರೇ ಎರಡೇ ಎರಡು!, ಮೋದಿ ಸರ್ಕಾರ ಕೇವಲ 7 ವರ್ಷಗಳಲ್ಲಿ 11 ಏಮ್ಸ್ ನಿರ್ಮಿಸಿದೆ ಮತ್ತು 3 ಪ್ರಗತಿಯಲ್ಲಿದೆ. ಫೇಕ್ ನ್ಯೂಸ್ ಫ್ಯಾಕ್ಟರಿ ಕಾಂಗ್ರೆಸ್ ಮಾತ್ರ ಎಲ್ಲವನ್ನೂ ನಾವೇ ಮಾಡಿದ್ದು ಎಂದು ಹೇಳುತ್ತಿದೆ’ ಎಂದು ಟೀಕಿಸಿದೆ.
‘ಕಾರ್ಖಾನೆಗಳು ಬಳಸುವ ಆಮ್ಲಜನಕದ ರಫ್ತಿನಲ್ಲಿ ಏರಿಕೆ ಕಂಡಿದೆ. ಇದನ್ನು ತಿರುಚಿರುವ ಕಾಂಗ್ರೆಸ್ ಪಕ್ಷದ ನಾಯಕರು, ಭಾರತ ವೈದ್ಯಕೀಯ ಆಮ್ಲಜನಕ ರಫ್ತು ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಯ ಮೂಲಕ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
‘ಕೋವಿಡ್ ಸಾಂಕ್ರಾಮಿಕವನ್ನು ಕಾಂಗ್ರೆಸ್ ಹೇಗೆ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ವಯನಾಡಿನ ಸಂಸದ ರಾಹುಲ್ ಗಾಂಧಿ ಅವರೇ ಸಾಕ್ಷಿ. ನಿರ್ಧರಿತವಾಗದ ಪ್ರಚಾರ ಸಭೆಯನ್ನೇ ರದ್ದು ಮಾಡಿದ ಖ್ಯಾತಿ ಯುವರಾಜನಿಗೆ ಸಲ್ಲುತ್ತದೆ. ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಬಲ್ಲರು’ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.