ADVERTISEMENT

ಸಿ.ಎಂ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ನಯಾಪೈಸೆ ಉಪಯೋಗವಾಗಿಲ್ಲ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2021, 9:15 IST
Last Updated 11 ಸೆಪ್ಟೆಂಬರ್ 2021, 9:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ರಾಜ್ಯದಲ್ಲಿ ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗಿಲ್ಲ. ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಾಗಿಲ್ಲ. ಜಿಎಸ್‌ಟಿ ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ’ ಎಂದು ವಾಗ್ದಾಳಿ ನಡೆಸಿದೆ.

'ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಮೂರು ವಾರಗಳ ಕಾಲ ಸಂಭ್ರಮಾಚರಣೆ ಮಾಡಲು ಬಿಜೆಪಿ ಮುಂದಾಗಿದೆ. ಆದರೆ, ಯಾವ ಸಾಧನೆಗಾಗಿ ಈ ಸಂಭ್ರಮ?, ಕಳಪೆ ಕೊರೊನಾ ನಿರ್ವಹಣೆಯಿಂದ ಜನರನ್ನು ಕೊಂದಿದ್ದಕ್ಕಾ?, ಆಕ್ಸಿಜನ್ ನೀಡದೆ ನರಳಿಸಿದ್ದಕ್ಕಾ?, ನಿರುದ್ಯೋಗ ಸೃಷ್ಟಿಸಿದ್ದಕ್ಕಾ?, ಬೆಲೆ ಏರಿಕೆಯಿಂದ ಜನರನ್ನು ಹಿಂಸಿಸುತ್ತಿರುವುದಕ್ಕಾ? ಆರ್ಥಿಕತೆ ಕುಸಿದಿದ್ದಕ್ಕಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

‘ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನಿವಾರ್ಯತೆಯನ್ನು ಬಳಸಿಕೊಂಡು ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಿಧಿಸಿ ಸುಲಿಗೆ ನಡೆಸಿದ್ದಾರೆ. ಆದರೆ, ಸಾರಿಗೆ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಖಾಸಗಿ ಬಸ್‌‌‌ಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲವೇ ಅಥವಾ ಖಾಸಗಿ ಲಾಭಿಗೆ ಮಣಿದಿದೆಯೇ? ಸರ್ಕಾರ ಕೂಡಲೇ ಕ್ರಮವಹಿಸಿ ಪ್ರಯಾಣಿಕರ ಹಿತ ಕಾಪಾಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.