ADVERTISEMENT

ಗೋಮೂತ್ರದ ಕತೆ ಹೇಳಿ ಜನತೆಗೆ ಅವೈಜ್ಞಾನಿಕ ಸಲಹೆ ನೀಡಿದ್ದು ನೀವಲ್ಲವೇ?: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2021, 13:24 IST
Last Updated 22 ಮೇ 2021, 13:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜನರಿಗೆ ಕೋವಿಡ್‌ ಲಸಿಕೆ ನೀಡುವ ಬದಲು ಗೋಮೂತ್ರದ ಕತೆ ಹೇಳಿ ಅವೈಜ್ಞಾನಿಕ ಸಲಹೆ ನೀಡಿದ್ದು ನೀವಲ್ಲವೇ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಲಸಿಕೆ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಕೋವಿಡ್‌ ಲಸಿಕೆಯನ್ನು ಮೊದಲು ಪಡೆದು ಧೈರ್ಯ ತುಂಬಬೇಕಾದ ಪ್ರಧಾನಿ ಮೋದಿ ಅವರು ಹಲವು ದಿನದವರೆಗೂ ಪಡೆಯದಿರುವುದರಿಂದಲೇ ಜನತೆಗೆ ಲಸಿಕೆಯ ಬಗ್ಗೆ ಅಪನಂಬಿಕೆ ಹುಟ್ಟಿದ್ದು. ‘ಲಸಿಕೆ ಇಲ್ಲದೆಯೇ ಕೊರೊನಾ ಗೆದ್ದಿದ್ದೇವೆ’ ಎನ್ನುವ ಮೂಲಕ ತಾತ್ಸಾರ ಹುಟ್ಟಿಸಿದ್ದೇ ಪ್ರಧಾನಿ’ ಎಂದು ಆರೋಪಿಸಿದೆ.

‘ಸದಾನಂದಗೌಡ ಅವರೇ, ನೀವು ಕರ್ನಾಟಕದವರೇ, ಫಾರ್ಮಾಸೂಟಿಕಲ್ಸ್ ನಿಮ್ಮದೇ ಖಾತೆಯಾಗಿದೆ. ಔಷಧ ಪೂರೈಕೆಯ ಅಧಿಕಾರ ನಿಮಗಿದೆ. ಹೀಗಿದ್ದೂ ‘ಸಾಧ್ಯವಾಗಿಲ್ಲ’ ಎಂಬ ಹತಾಶೆಯ ಮಾತಾಡುತ್ತಿದ್ದೀರಲ್ಲ ರಾಜ್ಯದ ಸೋಂಕಿತರು ನೇಣು ಹಾಕಿಕೊಳ್ಬೇಕಾ?, ಜನರಿಗೆ ಲಸಿಕೆ ನೀಡಲೂ ಆಗಲಿಲ್ಲ. ಈಗ ಕಪ್ಪು ಶಿಲೀಂಧ್ರ ಸೋಂಕಿಗೆ ಔಷಧ ನೀಡಲು ನಿಮ್ಮ ಕೈಲಾಗುತ್ತಿಲ್ಲ. ನಿಮಗೇಕೆ ಆ ಹುದ್ದೆ?’ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ADVERTISEMENT

‘ಬಿಜೆಪಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ ಎಂದು ತಾವೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕೆಲಸ ಮಾಡುವ ಬದಲು ಕಣ್ಣೀರು ಸುರಿಸುತ್ತಾರೆ, ನೇಣು ಹಾಕ್ಕೋಬೇಕಾ ಎಂದು ಕೇಳುತ್ತಾರೆ, ನೋಟ್ ಪ್ರಿಂಟ್ ಮಾಡ್ತಿಲ್ಲ ಅಂತಾರೆ ಹೀಗೆ... ವಿವಿಧ ಬಗೆಯಲ್ಲಿ ಹತಾಶೆ ವ್ಯಕ್ತಪಡಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಆಂಟಿ ಕುಳಿತಿದ್ದಾದರೂ ಏಕೆ?’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.

‘ಡಾ.ಸುಧಾಕರ್‌ ಅವರೇ, ರಾಜ್ಯದಲ್ಲಿ ಮತ್ತೊಂದು ಸವಾಲು ಎಂಬಂತೆ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದೆ. ಈವರೆಗೂ ಸರ್ಕಾರ ಈ ಸೋಂಕಿನ ಬಗ್ಗೆ ಚರ್ಚಿಸಿಲ್ಲ. ಎಷ್ಟು ಸೋಂಕಿತರಿದ್ದಾರೆ ಎಂದು ಮಾಹಿತಿ ಪಡೆದಿಲ್ಲ. ಎಂಫೋಟೆರಿಸಿನ್-ಬಿ ಬೇಡಿಕೆಯ ಅಂಕಿಸಂಖ್ಯೆಯ ಮಾಹಿತಿ ಪಡೆದಿಲ್ಲ. 1000ಕ್ಕೂ ಹೆಚ್ಚು ಪ್ರಕರಣವಿರುವ ಅಂದಾಜಿದೆ. 1,270 ವಯಲ್ಸ್ ಸಾಕೇ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.