ಚಿಕ್ಕಬಳ್ಳಾಪುರ: ಬಾಯಿ ಚಪಲಕ್ಕೆ ಏನೋ ಒಂದು ಮಾತಾಡೋದಲ್ಲ, ಒಂದು ತಿಂಗಳ ದವಸ ಧಾನ್ಯಗಳನ್ನು ರಾಜ್ಯಕ್ಕೆ ಕೊಡಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತಾನಾಡಿದ ಸಚಿವರು, ‘ಡಿಕೆಶಿ ಅವರಿಗೆ ಹೃದಯ ಇದೆಯಾ? ಯಡಿಯೂರಪ್ಪನವರಿಗೆ ಇಲ್ಲವಾ? ಹೃದಯ ಇಲ್ದೆ ಇದ್ದಿದ್ರೆ ಹೋಗ್ತಿರೋ ಎಲ್ರಿಗೂ ಫ್ರೀಯಾಗಿ ಕಳಿಸ್ತಿದ್ರಾ? ಉಚಿತ ಊಟ, ಅಡುಗೆ ಸಾಮಗ್ರಿ, ವಸತಿ,ಟ್ಯಾಕ್ಸಿ ಚಾಲಕರಿಗೆ₹ 5 ಸಾವಿರ ನೀಡಿದ್ದು ಯಾರು? ಶ್ರೀಮತಿ ಸೋನಿಯಾ ಗಾಂಧಿ ಕೊಟ್ರಾ? ಪ್ರತಿಪಕ್ಷದ ಅಧ್ಯಕ್ಷರಾಗಿ ಏನೋ ಒಂದು ಹೇಳ್ಬೇಕು ಹೇಳ್ತಾನೇ ಇರ್ತಾರೆ. ಹೇಳಿಕೆಗಳಿಗೂ ಒಂದು ಮಿತಿ ಬೇಕಲ್ವಾ’ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು.
ಹೃದಯವಂತಿಕೆ ಇದ್ದರೆ ಕಾಂಗ್ರೆಸ್ನಿಂದ ರಾಜ್ಯದ ಜನರಿಗೆ ಒಂದು ತಿಂಗಳುಗಳ ಕಾಲ ಸಾಮಗ್ರಿಗಳನ್ನು ಕೊಡಲಿ, ಅದನ್ನು ನಾನು ಸ್ವಾಗತ ಮಾಡುವೆ ಎಂದು ಹೇಳಿದರು.
ಕೊರೊನಾ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಕರಣ ದಾಖಲಾಗಿವೆ. ಇದರಲ್ಲಿ ಮಂಡ್ಯ, ರಾಯಚೂರು, ಯಾದಗಿರಿ, ಗದಗ ಸೇರಿದಂತೆ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರು. ಒಟ್ಟು 598 ಗುಣಮುಖರಾಗಿದ್ದು, 42 ಜನ ನಿಧನ ಹೊಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಕೊರೊನಾ ಪಟ್ಟಿಯಲ್ಲಿ ತೋರಿಸುತ್ತಿಲ್ಲ. ನಾವು ಎಲ್ಲವನ್ನೂ ಸರಿಯಾದ ಅಂಕಿ - ಅಂಶಗಳನ್ನು ನೀಡುವುದರಿಂದ ಸಾವಿನ ಸಂಖ್ಯೆ ಹೆಚ್ಚು ಕಾಣಿಸುತ್ತದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.