ಸಿದ್ದರಾಮಯ್ಯ , ಮುಖ್ಯಮಂತ್ರಿ
ಮೈಸೂರು: ‘ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮುಂದಿನ ವರ್ಷವೂ ದಸರಾ ಜಂಬೂಸವಾರಿಯಲ್ಲಿ ನಾನೇ ಏಕೆ ಪುಷ್ಪಾರ್ಚನೆ ಮಾಡಬಾರದು? ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ನಿರ್ವಹಿಸುವ ಭರವಸೆ ಇದೆ’ ಎಂದರು.
‘ಬಿಜೆಪಿಯವರು ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಬಜೆಟ್ ಅನ್ನೂ ಮಂಡಿಸುವುದಿಲ್ಲ ಎಂದಿದ್ದರು. ಆದರೆ, ಆಗಿದ್ದೇನೆ. ಕಾರ್ ಮೇಲೆ ಕಾಗೆ ಬಂದು ಕುಳಿತಿದ್ದಕ್ಕೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದಿದ್ದರು. ಆದರೆ, ಅದ್ಯಾವುದೂ ನಡೆಯಲಿಲ್ಲ. ನವೆಂಬರ್ ಕ್ರಾಂತಿ ಆಗುತ್ತದೆ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂದೆಲ್ಲಾ ಬಹಳ ಜನ ಬಹಳಷ್ಟು ಹೇಳುತ್ತಾರೆ; ಹೇಳಲಿ’ ಎಂದರು.
‘ನವೆಂಬರ್ನಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವ ಕಾರಣದಿಂದ ಆ ರೀತಿ ಮಾತನಾಡುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಹೈಕಮಾಂಡ್ ಹೇಳಿದಂತೆ ಕೇಳಬೇಕು. ಅವರ ತೀರ್ಮಾನದಂತೆ ಎಲ್ಲರೂ ನಡೆದುಕೊಳ್ಳಬೇಕಲ್ಲವೇ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.