ಬೆಂಗಳೂರು: ‘ಪಕ್ಷದ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಪತನವಾಗಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಇದು ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದ ಹಿತದೃಷ್ಟಿಯಿಂದ ಈ ಸರ್ಕಾರ ಆದಷ್ಟು ಬೇಗ ಹೋಗಬೇಕು’ ಎಂದರು.
‘ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ’ ಎಂಬ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ತಮ್ಮ ಪಕ್ಷದೊಳಗಿನ ಜಗಳ ಮುಚ್ಚಿಕೊಳ್ಳಲು ಅವರು ಸುಳ್ಳು ಹೇಳುತ್ತಿದ್ದಾರೆ. ಜಾರಕಿಹೊಳಿ ಪಕ್ಷ ತ್ಯಜಿಸಿದಾಗ ಮಹೇಶ್ ಕುಮಠಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಜೆಡಿಎಸ್ನ ಮೂವರು, ಕಾಂಗ್ರೆಸ್ನ 14 ಮಂದಿ ಅಧಿಕಾರ ಮತ್ತು ಹಣಕ್ಕಾಗಿ ಪಕ್ಷಾಂತರ ಮಾಡಿದರು’ ಎಂದರು.
‘ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಹೋದರೆ ನಾವು ಜವಾಬ್ದಾರರಲ್ಲ. ಶಾಸಕ ಉಮೇಶ ಕತ್ತಿ ನನ್ನನ್ನು ಭೇಟಿಯಾಗಲು ಪ್ರಯತ್ನಿಸಿದರು ಎಂಬುದು ಊಹಾಪೋಹ’ ಎಂದರು.
‘ಸಿದ್ದರಾಮಯ್ಯ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರ ಎಂದು ಮೋದಿ ಹೇಳಿದ್ದರು. ಈಗಿನ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂಬುದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ಕತ್ತಿಯವರ ಮನೆಯಲ್ಲಿ ಊಟಕ್ಕೆ ಸೇರಿದ್ದ ಶಾಸಕರೇ ಈ ಮಾತು ಹೇಳಿದ್ದಾರೆ’ ಎಂದರು.
‘ಆರ್ಥಿಕವಾಗಿ ದಿವಾಳಿ ಮಾಡಿದ್ದೇ ಮೋದಿ ಸಾಧನೆ’: ‘ಕೇಂದ್ರದ ಎನ್ಡಿಎ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಜನ ವಿರೋಧಿ ಆಡಳಿತ ನೀಡಿರುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.
‘ಸುಳ್ಳುಗಳ ಸರಮಾಲೆಯನ್ನೇ ಮೋದಿ ಪೋಣಿಸಿದ್ದರು. ಆರನೇ ವರ್ಷದಲ್ಲೂ ಅವರ ಸುಳ್ಳುಗಳು ಮುಂದುವರಿದಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.