ಬೆಂಗಳೂರು: ‘ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಧಾನಸೌಧ ಮುಂಭಾಗದ ಮೆಟ್ಟಿಲ ಮೇಲೆ ಸಂಜೆ 4 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬರುವಂತೆ ರಜನಿಕಾಂತ್, ಜ್ಯೂ. ಎನ್ಟಿಆರ್ ಅವರಿಗೆ ಆಹ್ವಾನ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ಪ್ರಶಸ್ತಿಯು ಬೆಳ್ಳಿಯ ಸ್ಮರಣಿಕೆ, ಜೊತೆಗೆ, 50 ಗ್ರಾಂ ಚಿನ್ನದ ಪದಕ ಇರಲಿದೆ’ ಎಂದರು.
‘ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ವಿ. ಸುನಿಲ್ ಕುಮಾರ್ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಗಾಯಕ ವಿಜಯಪ್ರಕಾಶ್ ತಂಡದಿಂದ ಸಂಗೀತ ರಸಮಂಜರಿ ಇರಲಿದೆ. 5 ಸಾವಿರ ಜನರಿಗೆ ಪಾಸ್ ನೀಡಲಾಗುವುದು’ ಎಂದರು.
‘ಕಂಠೀರವ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಪುನೀತ್ ಸಹೋದರ ಮತ್ತು ಕುಟುಂಬದ ಆಶಯದಂತೆ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿಂದೆ ಕುವೆಂಪು, ಡಾ. ರಾಜ್ಕುಮಾರ್, ಎಸ್. ನಿಜಲಿಂಗಪ್ಪ, ಪ್ರೊ. ಸಿ.ಎನ್.ಆರ್. ರಾವ್, ಪಂ. ಭೀಮಸೇನ ಜೋಶಿ, ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಿ. ವೀರೇಂದ್ರ ಹೆಗ್ಗಡೆ ಹೀಗೆ 8 ಸಾಧಕರಿಗೆ ವಿಧಾನ ಸೌಧದಲ್ಲಿಯೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ’ ಎಂದರು.
‘ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಆಗಿದೆ. ಬಡವರಿಗೆ ಸಹಾಯ ಮಾಡುವುದು, ಸಮಾಜಸೇವೆ ಯಲ್ಲಿ ಮುಂಚೂಣಿಯಲ್ಲಿದ್ದರು. ಒಬ್ಬ ಮನುಷ್ಯ ಸತ್ತರೆ ಒಂದು ವಾರ, ತಿಂಗಳು ನೆನಪಿನಲ್ಲಿರುತ್ತಾರೆ. ಆದರೆ, ಪುನೀತ್ ಸಮಾಧಿಯ ಬಳಿ ಪ್ರತಿ ನಿತ್ಯ ಜನ ಬರುತ್ತಿದ್ದಾರೆ. ಆ ರೀತಿ, ಅವರು ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.