ಬೆಂಗಳೂರು: ರಾಜ್ಯದಲ್ಲಿನ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷವೂ ಸುಮಾರು 10 ಸಾವಿರ ಮಂದಿ ಮೃತರಾಗುತ್ತಿರುವ ವಿಷಯ ಕುರಿತು ವಿಧಾನಪರಿಷತ್ನಲ್ಲಿ ಗಂಭೀರ ಚರ್ಚೆ ನಡೆಯಿತು.
ಬಿಜೆಪಿಯ ಕೆ.ಎಸ್. ನವೀನ್ ಅವರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಉತ್ತರಲ್ಲಿನ ಅಂಕಿಅಂಶಗಳನ್ನು ನೋಡಿ ಸದನದ ಸದಸ್ಯರು ಗಾಬರಿಯಾದರು. ರಸ್ತೆ ಗುಂಡಿಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚಬೇಕು. ವಾಹನ ದಟ್ಟಣೆ ಇರುವ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಅಗತ್ಯ ಇರುವ ಕಡೆ ರಸ್ತೆ ವಿಸ್ತರಣೆ ಮಾಡಬೇಕು. ಅತಿ ವೇಗಕ್ಕೆ ಕಡಿವಾಣ ಹಾಕಬೇಕು. ಹೆದ್ದಾರಿಗಳಲ್ಲೂ ವೇಗಮಿತಿ ಕಡ್ಡಾಯಗೊಳಿಸಬೇಕು. ಟೋಲ್ಗಳ ಮಧ್ಯೆ ಸಂಚರಿಸುವ ಸಮಯ ನಿಗದಿ ಮಾಡಿ, ನಿಗದಿತ ಸಮಯಕ್ಕಿಂತ ಮುಂಚೆ ತಲುಪುವ ವಾಹನಗಳಿಗೆ ದಂಡ ವಿಧಿಸಬೇಕು.. ಹೀಗೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು.
ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಬೈಕ್ ಮತ್ತು ಕಾರು ಅಪಘಾತಗಳಲ್ಲೇ ಅಧಿಕ ಸಂಖ್ಯೆಯಲ್ಲಿ ಮೃತರಾಗುತ್ತಿದ್ದಾರೆ. ಹೆಲ್ಮೆಟ್, ಸೀಟ್ಬೆಲ್ಟ್ ಕಡ್ಡಾಯಗೊಳಿಸಿದರೂ ಪಾಲನೆ ಆಗುತ್ತಿಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್ನ ಎಸ್.ಎಲ್. ಬೋಜೇಗೌಡ, ‘ನಮ್ಮ ಸಚಿವರು, ಶಾಸಕರು ಐಷಾರಾಮಿ ಕಾರುಗಳಲ್ಲಿ ಮುಂದೆ ಕಳಿತು ಪ್ರಯಾಣ ಮಾಡುತ್ತಾರೆ. ಯಾರೂ ಸೀಟ್ಬೆಲ್ಟ್ ಹಾಕುವುದೇ ಇಲ್ಲ. ಮೊದಲು ಇಲ್ಲಿಂದಲೇ ನಿಯಮ ಪಾಲನೆ ಆಗಬೇಕು’ ಎಂದು ಚರ್ಚೆಗೆ ತೆರೆ ಎಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.