ADVERTISEMENT

ಬೆಳಗಾವಿ ಉಪ ಚುನಾವಣೆ: ಬಿಜೆಪಿಗೆ ಪ್ರಯಾಸದ ಗೆಲುವು

ಬಸವಕಲ್ಯಾಣ ಬಿಜೆಪಿ ಪಾಲು: ಮಸ್ಕಿಯಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 2 ಮೇ 2021, 22:15 IST
Last Updated 2 ಮೇ 2021, 22:15 IST
ಮಂಗಲಾ ಅಂಗಡಿ
ಮಂಗಲಾ ಅಂಗಡಿ   

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಜಯಗಳಿಸಿದೆ. ಬೆಳಗಾವಿಯಲ್ಲಿ ಬಿಜೆಪಿ ಅತ್ಯಲ್ಪಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಬಸವಕಲ್ಯಾಣ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಆದರೆ ಮಸ್ಕಿಯಲ್ಲಿ ಕಾಂಗ್ರೆಸ್‌ ಭಾರಿ ಅಂತರದಲ್ಲಿ ಜಯಗಳಿಸಿದೆ.

ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ವಿರುದ್ಧ ಕೇವಲ 5,240 ಮತಗಳ ಅಂತರದಿಂದ ಅತ್ಯಂತ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಮತ ಎಣಿಕೆಯಲ್ಲಿ ಹಾವು– ಏಣಿ ಆಟ ನಿರಂತರ ಮುಂದುವರಿದಿತ್ತು. ಇಬ್ಬರಿಗೂ ದೊಡ್ಡ ಮೊತ್ತದ ಮತಗಳ ಮುನ್ನಡೆ ಕೊನೆಯವರೆಗೂ ಲಭಿಸಲೇ ಇಲ್ಲ. ಕೊನೆಯ ಕೆಲವು ಸುತ್ತುಗಳಲ್ಲಿ ದೊರಕಿದ ಅಲ್ಪ ಮತಗಳ ಮುನ್ನಡೆಯೇ ಮಂಗಲಾ ಅವರನ್ನು ಗೆಲುವಿನ ದಡ ಮುಟ್ಟಿಸಿತು.

ADVERTISEMENT

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ 3.90 ಲಕ್ಷ ಮತಗಳ ಅಂತರದ ಗೆಲುವು ಪಡೆದಿದ್ದರು. ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಕಾಂಗ್ರೆಸ್‌ನ ಮತ ಗಳಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಗಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದ ಶುಭಂ ವಿಕ್ರಾಂತ್‌ ಶೆಳ್ಕೆ 1.17 ಲಕ್ಷಗಳ ಮತ ಗಳಿಸಿದ್ದಾರೆ. ಇದು ಬಿಜೆಪಿಯ ಮತ ಗಳಿಕೆ ಕುಸಿಯಲು ಪ್ರಮುಖ ಕಾರಣ. ಶಿವಸೇನೆಯ ಪ್ರಮುಖ ಸಂಜಯ್‌ ರಾವುತ್‌ ಸೇರಿದಂತೆ ಹಲವರು ಬೆಳಗಾವಿಯಲ್ಲಿ ಪ್ರಚಾರ ನಡೆಸಿ, ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಚದುರಿಸಲು ಪ್ರಯತ್ನಿಸಿದ್ದರು. ಅದು ಒಂದು ಹಂತಕ್ಕೆ ಯಶ ಕಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಂಗಲಾ ಅಂಗಡಿ 4,40,327 ಮತಗಳನ್ನು ಪಡೆದರೆ, ಸತೀಶ ಜಾರಕಿಹೊಳಿ 4,35,087 ಪಡೆದರು. 5240 ಮತಗಳ ಅಂತರದಿಂದ ಗೆಲವು ಸಾಧಿಸಿದರು.

ಮಸ್ಕಿಯಲ್ಲಿ ಕೈ ಜಯಭೇರಿ: ಮಸ್ಕಿ (ಪರಿಶಿಷ್ಟ ಪಂಗಡಗಳ ಮೀಸಲು) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ವಿರುದ್ಧ 30,606 ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಪ್ರತಾಪಗೌಡ, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಎದುರು ಈಗ ಸೋಲು ಕಂಡಿದ್ದಾರೆ. ಪ್ರತಾಪಗೌಡ ಪಾಟೀಲ 55,731 ಮತಗಳನ್ನು, ತುರುವಿಹಾಳ 86,337 ಮತಗಳನ್ನು ಪಡೆದಿದ್ದಾರೆ.

ಕೆ.ಆರ್‌. ಪೇಟೆ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಉಸ್ತುವಾರಿಯಾಗಿದ್ದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿ ಕ್ಷೇತ್ರದ ಉಸ್ತುವಾರಿಯನ್ನೂ ನೀಡಲಾಗಿತ್ತು. ಕೆ.ಆರ್‌.ಪೇಟೆ ಮತ್ತು ಶಿರಾದಂತೆ ಮಸ್ಕಿ ಕ್ಷೇತ್ರದಲ್ಲೂ ಮುಖ್ಯಮಂತ್ರಿಯ ಪುತ್ರ ಚಾಣಾಕ್ಷತೆ ಮೆರೆಯುತ್ತಾರೆ ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿತ್ತು.
ಆದರೆ, ಭಾರಿ ಅಂತರದ ಸೋಲು ಬಿಜೆಪಿ ವರಿಷ್ಠರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

ಬಿಜೆಪಿ ತೆಕ್ಕೆಗೆ ಬಸವಕಲ್ಯಾಣ: ಕಾಂಗ್ರೆಸ್‌ ಶಾಸಕ ಬಿ. ನಾರಾಯಣ ರಾವ್‌ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ 20,629 ಮತಗಳ ಭಾರಿ ಅಂತರದ ಗೆಲುವು ಪಡೆದಿದ್ದಾರೆ. ಅನುಕಂಪದ ನಿರೀಕ್ಷೆಯಲ್ಲಿ ನಾರಾಯಣ ರಾವ್‌ ಅವರ ಪತ್ನಿ ಮಾಲಾ ನಾರಾಯಣ ರಾವ್‌ ಅವರನ್ನೇ ಕಣಕ್ಕಿಳಿಸಿದ್ದ ಕಾಂಗ್ರೆಸ್‌ ಸೋಲು ಕಂಡಿದೆ. ಮಾಲಾ ಅವರು 50,383 ಮತಗಳನ್ನು ಪಡೆದರೆ, ಶರಣು ಸಲಗರ 71,012 ಮತ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.