ADVERTISEMENT

ನಾವು ಮೊಘಲರ ವಂಶಸ್ಥರಲ್ಲ: ಸಿದ್ದರಾಮಯ್ಯಗೆ ಸಚಿವ ಸುನೀಲ್ ಕುಮಾರ್ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 12:44 IST
Last Updated 18 ಮೇ 2022, 12:44 IST
ಸುನೀಲ್ ಕುಮಾರ್
ಸುನೀಲ್ ಕುಮಾರ್   

ಬೆಂಗಳೂರು: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ. ಯಾವ ತಪ್ಪನ್ನು ಕಾಂಗ್ರೆಸ್ ಮಾಡಿತ್ತೋ ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ’ ಎಂದು ಸಚಿವ ಸುನೀಲ್ ಕುಮಾರ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

‘ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿದ ಅವಮಾನ’ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಸುನೀಲ್ ಕುಮಾರ್, ‘ಭಾರತದ ಶೌರ್ಯ, ಪರಾಕ್ರಮದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿ, ತಿರುಚಿದ ಇತಿಹಾಸವನ್ನು ತಿಳಿಸುವ ಕೃತ್ಯವನ್ನು ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಮಾಡುತ್ತಾ ಬಂದಿತ್ತು. ಈಗ ಭಾರತದ ಯುವಕರಿಗೆ ಬೇಕಾಗಿರುವುದು ಭಾರತದ ನೈಜ ಇತಿಹಾಸವೇ ಹೊರತು ದಾಸ್ಯದ ಇತಿಹಾಸವಲ್ಲ. ಆ ಇತಿಹಾಸವನ್ನು ಪಠ್ಯಕ್ರಮದಲ್ಲಿ ಜೋಡಿಸುವಂತಹ ಕಾರ್ಯವನ್ನು ತಜ್ಞರ ಸಮಿತಿ ಕೈಗೊಂಡಿರುವುದು ಸ್ವಾಗತಾರ್ಹ. ಭಾರತದ ಯುವ ಜನತೆಗೆ ಬೇಕಾಗಿರುವುದು ವಿವೇಕಾನಂದ, ವಿಜಯನಗರ, ನಾರಾಯಣ ಗುರು, ಶಂಕರಾಚಾರ್ಯರಂತಹ ದಾರ್ಶನಿಕರ ಜೀವನ ಕ್ರಮವೇ ಹೊರತು ಮೆಕಾಲೆ ಪ್ರೇರಿತ, ಮೊಘಲರ, ಟಿಪ್ಪು ಸುಲ್ತಾನರ ಇತಿಹಾಸವಲ್ಲ’ ಎಂದು ಉಲ್ಲೇಖಿಸಿದ್ದಾರೆ.

‘ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.