ADVERTISEMENT

ಕಟೀಲು ಕ್ಷೇತ್ರದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 19:45 IST
Last Updated 30 ಜನವರಿ 2020, 19:45 IST
ಕಟೀಲು ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ಮಂದಿಗೆ ಅನ್ನಪ್ರಸಾದಕ್ಕಾಗಿ ಗುರುವಾರ ಪಲ್ಲಪೂಜೆ ನೆರವೇರಿಸಲಾಯಿತು
ಕಟೀಲು ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ಮಂದಿಗೆ ಅನ್ನಪ್ರಸಾದಕ್ಕಾಗಿ ಗುರುವಾರ ಪಲ್ಲಪೂಜೆ ನೆರವೇರಿಸಲಾಯಿತು   

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಗುರುವಾರ ಬೆಳಿಗ್ಗೆ 9.37ಕ್ಕೆ ಬ್ರಹ್ಮಕಲಶಾಭಿಷೇಕ ವಿಜೃಂಭಣೆಯಿಂದ ನಡೆಯಿತು. ಎಂಟು ದಿನಗಳಿಂದ ವಿಶೇಷ ಪೂಜಾದಿ ಕಾರ್ಯಕ್ರಮಗಳಿಂದ ಗಮನ ಸೆಳೆದಿದ್ದ ಕಟೀಲು ಕ್ಷೇತ್ರದಲ್ಲಿ ಒಂಬತ್ತನೇ ದಿನವಾದ ಗುರುವಾರ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು.

12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದ ವಿಶೇಷ ಆಚರಣೆಯ ದರ್ಶನ ಪಡೆಯಲು ಬೆಳಿಗ್ಗೆಯಿಂದ ಜನರು ಸರದಿಯಲ್ಲಿ ನಿಂತಿದ್ದರು.

ಬೆಳಿಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ‘ಅವಭೃತ ಬಲಿ’, ‘ಮಹಾ ಪೂಜೆ’ ಮತ್ತು ‘ಪಲ್ಲ ಪೂಜೆ’ ನಡೆದವು. ಶನಿ ಯಾಗ, ಪವಿತ್ರ ಅಗ್ನಿ ಆಚರಣೆ, ಸಹಸ್ರ ಚಂಡಿಕಾ ಸಪ್ತಶತಿ ಪಾರಾಯಣ ಮತ್ತು ಕೋಟಿ ಜಪ ಯಜ್ಞಗಳನ್ನು ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ನವಗ್ರಹ ವನ ಮತ್ತು ನಕ್ಷತ್ರ ವನವನ್ನೂ ಸ್ಥಾಪಿಸಲಾಯಿತು. ಧಾರ್ಮಿಕ ಆಚರಣೆಯ ಭಾಗವಾಗಿ ವಿವಿಧ ಗ್ರಹಗಳನ್ನು ಪ್ರತಿನಿಧಿಸುವ ವಿವಿಧ ಸಸಿಗಳನ್ನು ರಾಶಿ ವನದಲ್ಲಿ ನೆಡಲಾಯಿತು.

ADVERTISEMENT

ದುರ್ಗಾಪರಮೇಶ್ವರಿಗೆ ಅರ್ಪಿಸಲು ಹೊರೆಕಾಣಿಕೆಯ ಮೂಲಕ ಅಪಾರ ಪ್ರಮಾಣದ ತರಕಾರಿ, ಸಾಮಗ್ರಿಗಳು ದೇವಸ್ಥಾನಕ್ಕೆ ಬಂದಿದ್ದು, ಬಹಳಷ್ಟು ಭಕ್ತರು ಸ್ವಯಂಪೇರಿತರಾಗಿ ತರಕಾರಿಗಳನ್ನು ಕತ್ತರಿಸುವುದು, ಅಡುಗೆ ತಯಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಸೇವೆ ಸಲ್ಲಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಸಹ, ಅಡುಗೆಮನೆಯಲ್ಲಿ ತರಕಾರಿಗಳನ್ನು ಕತ್ತರಿಸುವ ಮೂಲಕ ಸೇವೆ ಸಲ್ಲಿಸಿದರು. ಬಿಸಿಲಿನ ತಾಪ ಹೆಚ್ಚಿದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಕುಟುಂಬದೊಂದಿಗೆ ಬಂದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.