ಜಗಳೂರು (ದಾವಣಗೆರೆ ಜಿಲ್ಲೆ): ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐ.ಸಿ.ಸಿ.ಡಬ್ಲ್ಯು) ನೀಡುವ 2022ನೇ ಸಾಲಿನ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಪಟ್ಟಣದ ಎನ್.ಎನ್.ಕೆ. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿದ್ದಾನೆ.
ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಐ.ಸಿ.ಸಿ.ಡಬ್ಲ್ಯು ತಿಳಿಸಿದೆ.
ಕೀರ್ತಿ, ಜಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಮಂಜುನಾಥ್ ಸಾಹುಕಾರ್ ಹಾಗೂ ಶ್ರುತಿ ದಂಪತಿ ಪುತ್ರ.
ಬಾಲಕನ ಸಾಹಸ: ಕೆಲ ತಿಂಗಳ ಹಿಂದೆ ಬಾಲಕ ಕೀರ್ತಿ ತನ್ನ ಕುಟುಂಬದ ಸದಸ್ಯರೊಂದಿಗೆ ಜಗಳೂರು ತಾಲ್ಲೂಕಿನ ಅಗಸನಹಳ್ಳಿ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬಿದ್ದಿತ್ತು. ಅಲ್ಪಸ್ವಲ್ಪ ಗಾಯಗೊಂಡಿದ್ದ ಬಾಲಕ ಕಾರ್ನಿಂದ ಹೊರಬಂದು, ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ತಾಯಿಯನ್ನು ಹೊರಗೆ ಕರೆತಂದಿದ್ದ. ಜೊತೆಗೆ ಪೊಲೀಸರಿಗೂ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದ
ಅಪಘಾತದ ಸಮಯದಲ್ಲಿ ಧೈರ್ಯ ತೋರಿದ್ದರಿಂದ ಬಾಲಕನಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಕಳೆದ ನವೆಂಬರ್ 1ರಂದು 2022–23ನೇ ಸಾಲಿನ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ನೀಡಿ ಗೌರವಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.