ADVERTISEMENT

ಗುತ್ತಿಗೆದಾರ ಕೆಂಪಣ್ಣಗೆ ಕಿಕ್‌ಬ್ಯಾಕ್‌: ಶಾಸಕ ಗೋಪಾಲಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 11:42 IST
Last Updated 11 ಆಗಸ್ಟ್ 2023, 11:42 IST
   

ಬೆಂಗಳೂರು: ‘ನಮ್ಮ ಸರ್ಕಾರ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಈಗ ಕಾಂಗ್ರೆಸ್‌ನಿಂದ ಕಿಕ್‌ಬ್ಯಾಕ್‌ ಪಡೆದು ಸುಮ್ಮನಿದ್ದಾರೆ. ಇದರಿಂದ ಗುತ್ತಿಗೆದಾರರ ಕುಟುಂಬಗಳು ನೇಣು ಹಾಕಿ ಕೊಳ್ಳುವ ಸ್ಥಿತಿ ಬಂದಿದೆ’ ಎಂದು ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಹರಿಹಾಯ್ದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಮಧ್ಯಪ್ರವೇಶಿಸಿ ತಕ್ಷಣವೇ ಬಿಲ್‌ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್ ಅವರು ಅಜ್ಜಯ್ಯ ಅವರನ್ನು ನಂಬಿದ್ದಾರೆ. ಹಾಗಿದ್ದರೆ ಅಲ್ಲಿಗೆ ಹೋಗಿ ಯಾರಿಂದಲೂ ಕಮಿಷನ್‌ ಕೇಳಿಲ್ಲ ಎಂಬುದನ್ನು ಆಣೆ ಮಾಡಿ ಹೇಳಲಿ. ಗುತ್ತಿಗೆದಾರರು ಬೀದಿ ಬೀದಿ ಸುತ್ತಿದ್ದಾರೆ. ನಮ್ಮ ನಾಯಕರನ್ನೂ ಭೇಟಿ ಮಾಡಿದ್ದಾರೆ. 300 ಕ್ಕಿಂತ ಹೆಚ್ಚು ಗುತ್ತಿಗೆದಾರರು ರಾಷ್ಟ್ರಪತಿಗಳಿಗೂ ಮನವಿ ಮಾಡಿದ್ದಾರೆ. ಇದು ಸರ್ಕಾರಕ್ಕೆ ನಾಚಿಕೆ ತರುವ ಸಂಗತಿಯಲ್ಲವೇ ಎಂದು ಪ್ರಶ್ನಿಸಿದರು.

ADVERTISEMENT

ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಲಕ್ಷಗಟ್ಟಲೆ ಜನ ನಿರುದ್ಯೋಗಿಗಳಾಗುತ್ತಾರೆ. ರಾಜ್ಯ ಸರ್ಕಾರ ಬೆಂಗಳೂರಿಗೆ ಒಂದು ನೀತಿ, ಉಳಿದ ಕಡೆಗಳಿಗೇ ಬೇರೆ ನೀತಿ ಅನುಸರಿಸುತ್ತಿದೆ. ಇಲ್ಲಿ ಸರ್ಕಾರ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.

ಉಪಮುಖ್ಯಮಂತ್ರಿಯವರ ಸಲಹೆಗಾರ ಕೆ.ಟಿ.ನಾಗರಾಜ್‌ ಹಿನ್ನೆಲೆ ಏನು? ಅದನ್ನೂ ಕೆದಕಬೇಕಲ್ಲವೇ? 26 ಷರತ್ತುಗಳನ್ನು ಹಾಕಿ ಗುತ್ತಿಗೆದಾರರಿಗೆ ಕಿರುಕುಳ  ನೀಡುವುದನ್ನು ನೋಡಿದರೆ, ರಾಜ್ಯವನ್ನು ಲೂಟಿ ಮಾಡಲು ನೇಮಕ ಮಾಡಿದಂತಿದೆ ಎಂದು ಗೋಪಾಲಯ್ಯ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.