ADVERTISEMENT

ಕೊಡಗಿನಲ್ಲಿ ಹೇಗಿತ್ತು ಭಾನುವಾರದ ಲಾಕ್‌ಡೌನ್‌?

ಮಡಿಕೇರಿ: ಮಾಂಸದ ಅಂಗಡಿಗಳಿಗೆ ಗ್ರಾಹಕರ ಕೊರತೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 11:58 IST
Last Updated 5 ಜುಲೈ 2020, 11:58 IST
ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು – ಪ್ರಜಾವಾಣಿ ಚಿತ್ರ
ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು – ಪ್ರಜಾವಾಣಿ ಚಿತ್ರ   

ಮಡಿಕೇರಿ: ಕೊಡಗಿನಲ್ಲಿ ಭಾನುವಾರ ಲಾಕ್‌ಡೌನ್‌ನಿಂದ ಇಡೀ ಜಿಲ್ಲೆಯೇ ಸ್ತಬ್ಧವಾಗಿತ್ತು. ಬಿಡುವು ಕೊಟ್ಟು ಮಳೆಯೂ ಸುರಿಯುತ್ತಿದ್ದರ ಪರಿಣಾಮ, ಯಾರೂ ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ.

‘ಮಂಜಿನ ನಗರಿ’ ಮಡಿಕೇರಿಯ ರಸ್ತೆಗಳು ಜನರು ಹಾಗೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಜಿಲ್ಲೆಯಲ್ಲಿ ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿತ್ತು.

ಕೊರೊನಾ ಆತಂಕದ ನಡುವೆಯೇ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದ ಜನರು ಭಾನುವಾರ ಮಡಿಕೇರಿಯತ್ತ ಬರುವ ಪ್ರಯತ್ನ ಮಾಡಲಿಲ್ಲ. ಇದರಿಂದ ಜನರಲ್‌ ತಿಮ್ಮಯ್ಯ ವೃತ್ತ, ಹಳೇ ಖಾಸಗಿ ಬಸ್‌ ನಿಲ್ದಾಣ, ರಾಜಾಸೀಟ್‌ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕೊಹಿನೂರು ರಸ್ತೆ, ಕಾಲೇಜು ರಸ್ತೆ, ಮಹಾದೇವಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಕಾಲೇಜು ರಸ್ತೆಯಲ್ಲಿ ಎರಡು ಮೆಡಿಕಲ್‌ ಶಾಪ್‌ ಬಿಟ್ಟರೆ ಉಳಿದ ಮೆಡಿಕಲ್‌ ಶಾಪ್‌ಗಳೂ ಬಂದ್‌ ಆಗಿದ್ದು ಕಂಡುಬಂತು.

ADVERTISEMENT

ಮಾಂಸಕ್ಕೆ ಗ್ರಾಹಕರೇ ಇಲ್ಲ: ನಗರದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶವಿದ್ದರೂ ಯಾರೂ ಬಾಗಿಲು ತೆರೆದಿರಲಿಲ್ಲ. ಇನ್ನು ಕುರಿ ಹಾಗೂ ಕೋಳಿ ಮಾಂಸದ ಅಂಗಡಿಗಳು ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರು ಮಾತ್ರ ಇರಲಿಲ್ಲ.

ಪೊಲೀಸ್‌ ನಿಯೋಜನೆ: ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಬಂದೋಬಸ್ತ್‌ ನೋಡಿಕೊಳ್ಳಲು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳು ಆಗಾಗ್ಗೆ ನಗರ ಪರಿಸ್ಥಿತಿ ವಿಕ್ಷಣೆ ಮಾಡಿದರು. ನಗರದ ಪೊಲೀಸ್‌ ಠಾಣೆ ಎದುರು ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಇಂದಿರಾ ಗಾಂಧಿ ವೃತ್ತದಲ್ಲಿ ಹೋಂ ಗಾರ್ಡ್ಸ್‌ ಕರ್ತವ್ಯದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.