ADVERTISEMENT

ಮಾರ್ಗಸೂಚಿ ಪಾಲಿಸದ ಕೆಪಿಎಸ್‌ಸಿ: ಹೈಕೋರ್ಟ್ ಗರಂ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:46 IST
Last Updated 30 ಸೆಪ್ಟೆಂಬರ್ 2020, 20:46 IST
   

ಬೆಂಗಳೂರು: ಅಂಗವಿಕಲ ಹಕ್ಕುಗಳ ಕಾಯ್ದೆಯಡಿ 2018ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಅಂಧ ಅಭ್ಯರ್ಥಿಗಳಿಗೆ ಕೇಂದ್ರ ಮಾರ್ಗಸೂಚಿಗಳ ಪ್ರಕಾರ ಗಂಟೆಗೆ 20 ನಿಮಿಷಗಳ ಹೆಚ್ಚುವರಿ ಸಮಯ ಕೋರಿನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘2007ರ ಅಕ್ಟೋಬರ್‌ನಲ್ಲಿ ಹೊರಡಿಸಿದ ಆದೇಶವನ್ನು ರಾಜ್ಯ ಸರ್ಕಾರ ಮಾರ್ಪಡಿಸದ ಕಾರಣ ಕೇಂದ್ರದ ಮಾರ್ಗಸೂಚಿ ಅನುಸರಿಸುವುದಿಲ್ಲ ಎಂಬುದು ಆಯೋಗದ ‘ದಿಟ್ಟ ಹೇಳಿಕೆ’ ಎಂದಿರುವ ಪೀಠ, ಕೆಪಿಎಸ್‌ಸಿಯನ್ನು ತರಾಟೆಗೆ ತೆಗೆದುಕೊಂಡಿತು. ಮಾರ್ಗಸೂಚಿಯನ್ನು ಅನುಸರಿಸುವ ಕುರಿತು ಎರಡು ವಾರಗಳಲ್ಲಿ ನಿಲುವು ತಿಳಿಸಬೇಕು’ ಎಂದು ಹೇಳಿತು.

ADVERTISEMENT

‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ2018ರ ಆಗಸ್ಟ್ 29 ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದ ಸಲಹೆಯಂತೆ ರಾಜ್ಯ ಸರ್ಕಾರ ಯಾವುದೇ ಮಾರ್ಗಸೂಚಿ ನೀಡಿಲ್ಲ’ ಎಂದು ಕೆಪಿಎಸ್‌ಸಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.