ADVERTISEMENT

ಐವರು ವಿದ್ಯಾರ್ಥಿಗಳ ದುರ್ಮರಣಕ್ಕೆ ಮೇಲ್ವಿಚಾರಕ, ಜೆಸ್ಕಾಂ ನಿರ್ಲಕ್ಷ್ಯ ಕಾರಣ:ವರದಿ

ಐವರು ವಿದ್ಯಾರ್ಥಿಗಳ ದುರ್ಮರಣ

ಸಿದ್ದನಗೌಡ ಪಾಟೀಲ
Published 19 ಸೆಪ್ಟೆಂಬರ್ 2019, 19:36 IST
Last Updated 19 ಸೆಪ್ಟೆಂಬರ್ 2019, 19:36 IST
ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದ ಕಟ್ಟಡ ಎದುರು ನೂರಾರು ಜನರು ನೆರೆದಿದ್ದ ದೃಶ್ಯ
ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದ ಕಟ್ಟಡ ಎದುರು ನೂರಾರು ಜನರು ನೆರೆದಿದ್ದ ದೃಶ್ಯ   

ಕೊಪ್ಪಳ: ನಗರದ ಬನ್ನಿಕಟ್ಟೆ ಪ್ರದೇಶದಲ್ಲಿರುವದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದ ಐವರು ವಿದ್ಯಾರ್ಥಿಗಳು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಸಿ.ಡಿ.ಗೀತಾ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಮಕ್ಕಳ ಸಾವಿಗೆನಿಲಯದ ಮೇಲ್ವಿಚಾರಕ, ಜೆಸ್ಕಾ ಸಿಬ್ಬಂದಿ ಮತ್ತು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಅಧಿಕಾರಿ ನಿರ್ಲಕ್ಷ್ಯವೇ ಕಾರಣಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಈ ಹಾಸ್ಟೆಲ್‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ್ದು, 12 ವರ್ಷಗಳಿಂದ ಖಾಸಗಿ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ವಸತಿ ನಿಲಯದ ಪಕ್ಕದಲ್ಲೇ 25 ಕೆ.ವಿ ವಿದ್ಯುತ್ ಪರಿವರ್ತಕ ಕೂಡಾ ಅಪಾಯಕಾರಿ ಸ್ಥಿತಿಯಲ್ಲಿ ಇತ್ತು. ನಿಲಯವನ್ನು ಸ್ಥಳಾಂತರಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು ಎಂದು ವರದಿ ತಿಳಿಸಿದೆ.

ವಸತಿ ನಿಲಯದ ಎದುರು ಹಾದುಹೋಗಿರುವ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ಅಪಾಯಕಾರಿ ಮಟ್ಟದಲ್ಲಿದೆ. ಅಕ್ಕಪಕ್ಕದಲ್ಲಿ ಪ್ಲ್ಯಾಸ್ಟಿಕ್ ಪೈಪ್ ಹಾಕಲಾಗಿದ್ದು ವಸತಿ ನಿಲಯದ ಎದುರು ಹಾಕದಿರುವುದು ಲೋಪ. ಮಕ್ಕಳು ವಿದ್ಯುತ್ ಅಪಘಾತದಿಂದ ಚೀರುತ್ತಾ, ಉರುಳಾಡುವುದು ಕಂಡ ಜನ ಜೆಸ್ಕಾಂಗೆ ದೂರವಾಣಿ ಕರೆ ಮಾಡಿದರೂ ಸಿಬ್ಬಂದಿ ಸ್ವೀಕರಿಸಿರಲಿಲ್ಲ. ನಿಲಯದ ಅಡುಗೆ ಸಹಾಯಕನೇ ಕೆಳಗೆ ಇಳಿದು ಬಂದು ಪರಿವರ್ತಕದ ಪ್ಯೂಸ್‌ ಅನ್ನು ಕಿತ್ತು ಹಾಕಿದರು. ಈ ಕುರಿತು ಜೆಸ್ಕಾಂ ಬಳ್ಳಾರಿ ವಿಭಾಗದ ಉಪಮುಖ್ಯ ವಿದ್ಯುತ್ ಪರೀಕ್ಷಕ ‘ಆಕಸ್ಮಿಕ ಆಘಾತ’ ಎಂದು ವರದಿ
ನೀಡಿದ್ದರು.

ಈ ಕಟ್ಟಡ ಬಸನಗೌಡ ಹಿರೇವೆಂಕನಗೌಡ್ರ ಎಂಬುವವರಿಗೆ ಸೇರಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಯಾವ ಸೂಚನೆಯನ್ನೂ ಪಾಲಿಸಿಲ್ಲ. ಕಟ್ಟಡ ಎದುರು ಮಾತ್ರ ಆವರಣ ಗೋಡೆ ಇದ್ದು, ಸುತ್ತಲೂ ಆವರಣ ಗೋಡೆ ಇಲ್ಲ. ಗಾಳಿ, ಬೆಳಕು ಬಾರದ ಇಕ್ಕಟ್ಟಿನಲ್ಲಿದೆ. ಅಲ್ಲದೆ ನಗರಸಭೆಯಿಂದ ಅನುಮತಿ ಪಡೆಯದೆ ಮೊಬೈಲ್ ಟವರ್ ಹಾಕಿಸಿಕೊಂಡಿದ್ದು ಅಕ್ರಮ ಎಂದು ಸಾಬೀತಾಗಿದೆ.

***

ಉಪವಿಭಾಧಿಕಾರಿ ನೀಡಿರುವ ತನಿಖಾ ವರದಿ ಪರಿಶೀಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು

- ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.