
ಬೆಂಗಳೂರು: ‘ಪಶ್ಚಿಮ ಏಷ್ಯಾದ ಯುದ್ಧಪೀಡಿತ ದೇಶಗಳಲ್ಲಿ ಸುಮಾರು 109 ಕನ್ನಡಿಗರು ಸಿಲುಕಿದ್ದು, ಅವರ ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದೇವೆ. ಶನಿವಾರ ರಾತ್ರಿಯಿಂದಲೇ ಸಹಾಯವಾಣಿ ಆರಂಭಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ನಮ್ಮ ವಿಪತ್ತು ನಿರ್ವಹಣೆ ವಿಭಾಗ ಕಾರ್ಯಪ್ರವೃತ್ತವಾಗಿದೆ. 100 ಜನರು ದುಬೈನಲ್ಲಿ, 9 ಮಂದಿ ಬಹರೇನ್ನಲ್ಲಿದ್ದಾರೆ. ಇನ್ನೂ ಯಾರಾದರೂ ಇದ್ದರೆ ಕರೆ ಮಾಡಿ ಮಾಹಿತಿ ಕೊಡಬೇಕು’ ಎಂದರು.
‘ಕನ್ನಡಿಗರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರದ ಜೊತೆ ನಾವು ಮಾತುಕತೆ ನಡೆಸುತ್ತಿದ್ದೇವೆ. ವಿಮಾನ ಹಾರಾಟ ರದ್ದುಗೊಂಡಿರುವುದರಿಂದ ವಿಶೇಷ ವಿಮಾನ ಕಳುಹಿಸಲು ಸಾಧ್ಯ ಇಲ್ಲ. ನಿಷೇಧ ತೆರವುಗೊಂಡ ನಂತರ ಅಲ್ಲಿಗೆ ವಿಮಾನ ಕಳುಹಿಸಬಹುದು. ಕದನ ವಿರಾಮ ಘೋಷಣೆ ಆಗುವವರೆಗೆ ವಿಮಾನ ಹಾರಾಟ ಇರುವುದಿಲ್ಲ. ಹೀಗಾಗಿ, ಎಲ್ಲರೂ ಶಾಂತರಾಗಿ ಇರಬೇಕು’ ಎಂದು ಸಚಿವರು ಮನವಿ ಮಾಡಿದರು.
‘ದುಬೈ, ಬಹರೇನ್ ವಿಮಾನ ನಿಲ್ದಾಣಗಳಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಅಲ್ಲಿ ಸೌಲಭ್ಯಗಳಿಲ್ಲ, ಹೊರಗೆ ಹೋಗಲು ವೀಸಾ ಇಲ್ಲ ಎಂದೂ ಹೇಳುತ್ತಿದ್ದಾರೆ. ಹೀಗಾಗಿ, ನಾವು ಅವರ ಮಾಹಿತಿಯನ್ನು ವಿದೇಶಾಂಗ ಇಲಾಖೆಗೆ ಕೊಡುತ್ತಿದ್ದೇವೆ. ಇಲಾಖೆಯವರು ಸ್ಥಳೀಯ ರಾಯಭಾರಿ ಕಚೇರಿಗೆ ತಿಳಿಸುತ್ತಿದ್ದು, ಅಲ್ಲಿನವರು ನೆರವು ನೀಡಲಿದ್ದಾರೆ’ ಎಂದರು.
‘ಕೊಲ್ಲಿ ರಾಷ್ಟ್ರಗಳ ಸಹಾಯವಾಣಿ ಸಂಖ್ಯೆಯನ್ನು ಕೊಟ್ಟಿದ್ದೇವೆ. ಯಾರಾದರೂ ಸಿಲುಕಿದ್ದರೆ, ಅಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಸಹಾಯ ಯಾಚಿಸಬಹುದು. ಆಗ ಅಲ್ಲಿರುವವರಿಗೆ ವೀಸಾ ನೀಡುವ ಪ್ರಯತ್ನ ಆಗಲಿದೆ. ಅಂಥವರು ಹೋಟೆಲ್ಗಳಲ್ಲಿ ತಂಗಬಹುದು. ಹೋಟೆಲ್ ವಾಸ್ತವ್ಯಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರದಿಂದ ನೇರವಾಗಿ ಭರಿಸಲು ಅವಕಾಶ ಇಲ್ಲ. ಕೇಂದ್ರ ಸರ್ಕಾರ ಭರಿಸಿದರೆ, ಅದು ಎಷ್ಟೇ ಹಣವಾದರೂ ರಾಜ್ಯ ಸರ್ಕಾರ ನೀಡಲಿದೆ’ ಎಂದೂ ಹೇಳಿದರು.
‘ಯುದ್ಧಪೀಡಿತ ಪ್ರದೇಶಗಳಲ್ಲಿರುವವರು ಸ್ಥಳೀಯ ಸರ್ಕಾರ ನೀಡುವ ಸಲಹೆ, ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನೂ ಎರಡು ವಾರ ಯುದ್ಧ ನಡೆಯುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.