ADVERTISEMENT

ಎಚ್‌ಡಿಕೆ ಮತ್ತೆ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 20:00 IST
Last Updated 2 ಜೂನ್ 2019, 20:00 IST
.
.   

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಗ್ರಾಮ ವಾಸ್ತವ್ಯ’ ಮಾಡಲು ಮುಂದಾಗಿದ್ದಾರೆ. ಈ ಬಾರಿ ವಾಸ್ತವ್ಯಕ್ಕೆ ಮನೆ ಬದಲು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಮೈತ್ರಿ ಪಕ್ಷದ ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. ಬಿಜೆಪಿ ಎದುರು ಹೀನಾಯವಾಗಿ ಸೋತಿದ್ದು, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಕಷ್ಟ. ಚುನಾವಣೆ ಎದುರಾದರೆ ಜನರ ಬಳಿಗೆ ಯಾವ ಮುಖಹೊತ್ತು ಹೋಗುವುದು, ಏನು ಉತ್ತರ ನೀಡುವುದು ಎಂಬ ಆತಂಕ ಎರಡೂ ಪಕ್ಷಗಳ ನಾಯಕರನ್ನು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಸಜ್ಜಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಈ ಬಾರಿ ಕಾಂಗ್ರೆಸ್ ಜತೆಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದರೂ, ಕುಮಾರಸ್ವಾಮಿ ಅವರು ವಿಧಾನಸೌಧ, ಐಷಾರಾಮಿ ಹೋಟೆಲ್‌ನಿಂದ ಹೊರಗೆ ಬಂದಿರಲಿಲ್ಲ. ಆಪರೇಷನ್ ಕಮಲದ ಯತ್ನ,ಕಾಂಗ್ರೆಸ್ ನಾಯಕರ ನಡವಳಿಕೆ, ವಿಭಿನ್ನ ಹೇಳಿಕೆಗಳು ವರ್ಷಪೂರ್ತಿ ಸರ್ಕಾರವನ್ನು ಕಾಡಿದ್ದವು. ಜತೆಗೆಸಿದ್ದರಾಮಯ್ಯ ಬೆಂಬಲಿಗರು ಮಾತು ಮುಖ್ಯಮಂತ್ರಿಗೆ ಮುಜುಗರವನ್ನುಂಟು ಮಾಡುತ್ತಿತ್ತು.

ಜೆಡಿಎಸ್–ಬಿಜೆಪಿ ಮೈತ್ರಿಯ 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಿ,ದಲಿತರು, ಎಚ್‌ಐವಿ ಸೋಂಕಿತರು, ಬಡವರ ಮನೆಯಲ್ಲಿ ಮಲಗುತ್ತಿದ್ದರು. ಇದು ಕುಮಾರಸ್ವಾಮಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಗ್ರಾಮೀಣ ಭಾಗದ ಜನ ಮುಖ್ಯಮಂತ್ರಿಯನ್ನು ಕಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.